ರಾಯಚೂರು: ಪ್ರವಾಹದ ಪರಿಸ್ಥಿತಿ ಎದುರಾದಾಗ ನಾನು ಆಂಧ್ರದ ಸಿಎಂ ಆಗಿದ್ದೆ. ಪ್ರವಾಹದಿಂದ ಮಂತ್ರಾಲಯ ಕ್ಷೇತ್ರ ಸಂಕಷ್ಟಿಕ್ಕೀಡಾಗಿತ್ತು. ಆದರೆ, ಪ್ರವಾಹೋತ್ತರ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಚುರುಕಿನಿಂದ ನಡೆದಿರುವುದು ನೆಮ್ಮದಿ ತಂದಿದೆ. ಇನ್ನೂ ಹೆಚ್ಚಿನ ರೀತಿ ಈ ಕ್ಷೇತ್ರ ಅಭಿವೃದ್ಧಿ ಹೊಂದಬೇಕು ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರೋಸಯ್ಯ ಹೇಳಿದರು.
ಶುಕ್ರವಾರ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠಕ್ಕೆ ಕುಟುಂಬ ವರ್ಗ ಹಾಗೂ ಆಪ್ತರೊಂದಿಗೆ ಭೇಟಿ ನೀಡಿ ರಾಘವೇಂದ್ರಸ್ವಾಮಿ ಬೃಂದಾವನ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂತ್ರಾಲಯ ಕ್ಷೇತ್ರಕ್ಕೆ ಭೇಟಿ ನೀಡಬೇಕು. ದರ್ಶನ ಪಡೆಯಬೇಕು ಎಂಬುದು ಬಹು ದಿನದ ಆಶಯ. ಮುಖ್ಯಮಂತ್ರಿ ಆಗಿದ್ದಾಗ ಕಾರ್ಯದ ಒತ್ತಡ, ಪಕ್ಷದ ಚಟುವಟಿಕೆ ಹಿನ್ನೆಲೆಯಲ್ಲಿ ಬಿಡುವ ಆಗಿರಲಿಲ್ಲ. ಈಗ ದರ್ಶನಕ್ಕೆ ಆಗಮಿಸಿರುವುದಾಗಿ ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು. ಮಂತ್ರಾಲಯ ವಿಧಾನಸಭಾ ಕ್ಷೇತ್ರದ ಶಾಸಕ ಬಾಲನಾಗಿರೆಡ್ಡಿ, ಸರಪಂಚ ಪನ್ನಗ ವೆಂಕಟೇಶ, ಶ್ರೀಮಠದ ಆಡಳಿತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.