ಅಯೋಧ್ಯ (ಪಿಟಿಐ): ಈ ಪವಿತ್ರ ನಗರದಲ್ಲಿ ಬೃಹತ್ ರಾಮ ಮಂದಿರ ನಿರ್ಮಾಣವಾದ ದಿನ ತಮ್ಮ ಜೀವನದ ಗುರಿ ಈಡೇರಿದಂತೆ ಎಂದು ಹೇಳುವ ಮೂಲಕ, ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅಯೋಧ್ಯೆ ವಿವಾದಕ್ಕೆ ಮರು ಜೀವ ನೀಡಿದ್ದಾರೆ.
ಶನಿವಾರ ಇಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, `ನನ್ನ ಸಾರ್ವಜನಿಕ ಜೀವನದ ಗುರಿ ಸಾಧನೆ ಆಗುವುದು ಭಗವಾನ್ ರಾಮನ ವಿಗ್ರಹ ಇರಿಸಿರುವ ಜಾಗದಲ್ಲಿ ಭವ್ಯವಾದ ದೇವಸ್ಥಾನ ನಿರ್ಮಾಣವಾದಾಗ~ ಎಂದು ಹೇಳಿದರು.
`ಆ ದಿನ ಬೇಗ ಬರಲಿ ಎಂಬುದು ಎಲ್ಲ ರಾಮ ಭಕ್ತರ ಆಶಯವಾಗಿದೆ ಎಂದು ನಾನು ನಂಬಿದ್ದೇನೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯುತ್ತದೆ~ ಎಂದು ಹೇಳಿದರು.
ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಸ್ತಾಪಿಸಿದ ಅಡ್ವಾಣಿ, ವಿಗ್ರಹ ಇರಿಸಿರುವ ಸ್ಥಳ ಭಗವಾನ್ ರಾಮನ ಜನ್ಮಸ್ಥಳ ಎಂಬುದನ್ನು ಎಲ್ಲ ಮೂವರು ನ್ಯಾಯಾಧೀಶರೂ ಒಪ್ಪಿಕೊಂಡಿದ್ದಾರೆ ಎಂದರು.
ಹಿಂದೂ, ಮುಸ್ಲಿಂ ಮುಖಂಡರು ಒಂದೆಡೆ ಕುಳಿತು ವಿವಾದ ಇತ್ಯರ್ಥಕ್ಕೆ ಅಗತ್ಯವಾದ ಸೂತ್ರವನ್ನು ರೂಪಿಸಬೇಕು ಎಂದು ಹೇಳಿದರು.