ಬೆಂಗಳೂರು: ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ಅರಳಿನಿಂತಿದ್ದ ‘ಕಥಾವನ’ ಅಕ್ಷರಶಃ ಮಕ್ಕಳ ಸಾಹಿತ್ಯ ಲೋಕವನ್ನೇ ಅನಾವರಣಗೊಳಿಸಿತ್ತು.
ಮಕ್ಕಳ ಕಲ್ಪನೆಯನ್ನು ತೀಡಿ, ಅವರೊಳಗೆ ಕಥಾ ಲೋಕವನ್ನು ಸೃಷ್ಟಿಸುವ ಕಾರ್ಯಕ್ಕೆ ಅಜೀಂ ಪ್ರೇಮ್ಜೀ ವಿಶ್ವವಿದ್ಯಾಲಯ ಗುರುವಾರ ಚಾಲನೆ ನೀಡಿತ್ತು. ಇದಕ್ಕೆ ವೇದಿಕೆಯಾಗಿದ್ದ ಕೂಟದ ಮೈದಾನದಲ್ಲಿ ಚಿಣ್ಣರ ಸೃಜನಶೀಲ ಚಿಲಿಪಿಲಿ ಕರ್ಣಾನಂದವನ್ನು ತಂದಿತ್ತು.
ನಗರದ ಸುತ್ತಮುತ್ತ ಇರುವ 40ಕ್ಕೂ ಹೆಚ್ಚು ಬಿಬಿಎಂಪಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೇ ಕೊಡತಿ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶಾಲಾ ಮಕ್ಕಳು ಸಹ ಇದ್ದರು.
ಕತೆ ಕೇಳಲು ಸೈ, ಚಿತ್ರ ಬಿಡಿಸಲು ಜೈ: ಒಂದೆಡೆ ಮಕ್ಕಳು ಹಸ್ತದ ಚಿತ್ರವನ್ನು ಬಿಡಿಸಿ, ಅದಕ್ಕೆ ಬಣ್ಣ ತುಂಬುತ್ತಿದ್ದರು. ಬಣ್ಣ ಹಚ್ಚಿದ ಹಸ್ತದ ಚಿತ್ರವನ್ನು ಕತ್ತರಿಸಿ, ಮರದ ಆಕೃತಿಗೆ ಅಂಟಿಸುತ್ತಿದ್ದರು. ನೂರಾರು ಹಸ್ತಗಳು ಮರದಲ್ಲಿಯೇ ಫಲಬಿಟ್ಟಂತೆ ನೋಡುಗರಿಗೆ ಭಾಸವಾಗುತ್ತಿತ್ತು.
ಇನ್ನೊಂದೆಡೆ ಸೂಜಿ ಬಿದ್ದರೂ ಕೇಳಿಸುವಷ್ಟು ನೀರವ ಮೌನ. ಶಿಕ್ಷಕರೊಬ್ಬರು ಹೇಳುತ್ತಿದ್ದ ‘ಹುಲಿ–ನರಿ’ಯ ಕತೆಯನ್ನು ಮಕ್ಕಳೆಲ್ಲರೂ ಬಹಳ ಕುತೂಹಲದಿಂದ ಕೇಳುತ್ತಿದ್ದರು. ಒಂದಾದ ಮೇಲೆ ಒಂದರಂತೆ ಶಿಕ್ಷಕರು ಕತೆ ಹೇಳುತ್ತಿದ್ದರೆ, ಕುತೂಹಲ ತಣಿಯದ ಮಕ್ಕಳಿಂದ ‘ಇನ್ನಷ್ಟು ಕತೆ ಹೇಳಿ ’ ಎಂಬ ಮಾತು ಕೇಳಿಬಂತು.
ಭಾಷೆ ಅಡ್ಡಿಯಾಗಲಿಲ್ಲ: ಕತೆ ಹೇಳುವವರು ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲಿ ಕತೆಯನ್ನು ಸೊಗಸಾಗಿ ನಿರೂಪಿಸುತ್ತಿದ್ದರು. ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿದ್ದರೂ, ಕತೆ ಅರ್ಥೈಸಿಕೊಳ್ಳಲು ಮಕ್ಕಳಿಗೆ ಭಾಷೆ ಅಡ್ಡಿಯಾಗಲಿಲ್ಲ. ‘ನೆರೆಮನೆಯ ಕಿಟ್ಟು’, ‘ಬಾನೂರಿನ ಹಕ್ಕಿ ಮತ್ತು ಚಂದಮಾಮಾ’, ‘ಪಟ್ಟೆ ಹುಲಿ ಹಾಗೂ ಕಂತ್ರಿ ನರಿ’ ಹೀಗೆ ಹಲವು ಪಾತ್ರಗಳ ಮೂಲಕ ಮಕ್ಕಳು ಕಥಾಲೋಕಕ್ಕೆ ಪ್ರವೇಶಿಸುತ್ತಿದ್ದರು. ನೋಡಲು ಬಂದಿದ್ದ ಪೋಷಕರಿಗೂ ಕಥಾ ಸಮಯದ ಬಗ್ಗೆ ಆಸಕ್ತಿ ಮೂಡಿತ್ತು.
ಸೂತ್ರ ಹಿಡಿದ ಮಕ್ಕಳು: ನವಿಲು, ಕಾಗೆ, ಬೆಕ್ಕು ಸೇರಿದಂತೆ ಪುಟ್ಟ ಗೊಂಬೆಗಳನ್ನು ತಯಾರಿಸಿದ ಮಕ್ಕಳು ಅದರ ಸೂತ್ರ ಹಿಡಿದು ಕತೆ ಹೇಳಲು ಆರಂಭಿಸಿದ್ದರು.
‘ಕಥಾವನ’ವನ್ನು ಉದ್ಘಾಟಿಸಿದ ಚಿತ್ರನಿರ್ದೇಶಕ ಟಿ.ಎಸ್.ನಾಗಾಭರಣ, ‘ಸೃಜನಶೀಲ ಬೆಳವಣಿಗೆಗೆ ಪೂರಕವಾಗಿರುವ ಕಲೆ, ಸಾಹಿತ್ಯ, ಸಿನಿಮಾ ಕ್ಷೇತಗಳಲ್ಲಿ ಮಕ್ಕಳಿಗಾಗಿಯೇ ಒಂದಷ್ಟು ಅವಕಾಶಗಳನ್ನು ಸೃಷ್ಟಿಸುವ ತುರ್ತು ಎದ್ದುಕಾಣುತ್ತಿದೆ’ ಎಂದರು.
‘ಒಳಗಿರುವ ಸಹಜ ಹಿಂಸಾಪ್ರವೃತ್ತಿಪ್ರಚೋದಿಸಲು ಎಲ್ಲ ಮಾಧ್ಯಮಗಳು ಹಾತೊರೆಯುತ್ತಿವೆ. ಇವನ್ನು ಬದಿಗೊತ್ತಿ ಮಾನವೀಯ ನೆಲೆಯನ್ನು ಒಳಗೊಂಡ ಕತೆಗಳು ಮಕ್ಕಳನ್ನು ತಲುಪಬೇಕಿವೆ’ ಎಂದು ತಿಳಿಸಿದರು.
ಮಕ್ಕಳ ಆಸಕ್ತಿ, ಕುತೂಹಲವನ್ನು ಹೆಚ್ಚಿಸಿ, ಅವರನ್ನು ಸೃಜನಶೀಲ ವ್ಯಕ್ತಿಗಳಾಗಿ ಮಾಡಲು ಯಾವುದಾದರೊಂದು ವಾಹಿನಿ ರೂಪುಗೊಂಡಿದೆಯೇ?’ ಎಂದು ಪ್ರಶ್ನಿಸಿದರು.
ಶಿಶು ಸಾಹಿತ್ಯದ ಚಿಂತನ– ಮಂಥನ: ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್, ‘ಮಕ್ಕಳ ಮುಗ್ಧತೆಯನ್ನು ಕೇಂದ್ರೀಕರಿಸಿ ರವೀಂದ್ರ ನಾಥ್ ಟ್ಯಾಗೋರ್ ಅವರು ರಚಿಸಿರುವ ‘ಕ್ರೆಸೆಂಟ್ ಮೂನ್’ ಕೃತಿಯು ಮಕ್ಕಳನ್ನು ತಲುಪುವುದು ಕಷ್ಟ. ಹಾಗಾಗಿ ಮಕ್ಕಳ ಕಲ್ಪನಾವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಾಹಿತ್ಯ ಸೃಷ್ಟಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು.
‘ಜನಪದ ಸಂಸ್ಕೃತಿಯಲ್ಲಿ ಹರಳುಗಟ್ಟಿರುವ ಕತೆಗಳನ್ನು ಮಕ್ಕಳಿಗೆ ಇಷ್ಟವಾಗುವ ಮಾರ್ಗದಲ್ಲಿ ತಿಳಿಸಬೇಕಿದೆ. ಮಕ್ಕಳನ್ನು ಅಕ್ಷರ ಲೋಕಕ್ಕೆ ಕರೆತರುವ ಪ್ರಯತ್ನ ಮಾಡಬೇಕಿದೆ’ ಎಂದರು.
ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರರಾವ್, ‘ಮನರಂಜನೆಗಾಗಿ ಇರುವ ಕಾರ್ಟೂನ್ ನೆಟ್ವರ್ಕ್ ಮಕ್ಕಳನ್ನು ಒಂದು ಬಗೆಯ ಕಾರ್ಟೂನ್ದಾಸರನ್ನಾಗಿ ಮಾಡುತ್ತದೆ. ಅಲ್ಲದೇ ಕಾರ್ಟೂನ್ಗಳು ಮಕ್ಕಳಲ್ಲಿ ಏಕತಾನತೆಯನ್ನು ಮೂಡಿಸುವುದರಿಂದ, ಕಲ್ಪನಾ ಶಕ್ತಿ ಕುಂಠಿತಗೊಳ್ಳುತ್ತದೆ’ ಎಂದರು.
ಅಭಿನವ, ಸಪ್ನ ಬುಕ್ ಹೌಸ್, ನವಕರ್ನಾಟಕ, ಫಂಕಿ ರೇನ್ಬೋ ಸೇರಿದಂತೆ ವಿವಿಧ ಪುಸ್ತಕ ಮಳಿಗೆಗಳು ಶಿಶು ಸಾಹಿತ್ಯ ಸೇರಿದಂತೆ ಹಲವು ಪುಸ್ತಕಗಳನ್ನು ಪ್ರದರ್ಶಿಸಿದವು. ಮೇಳವು ಡಿ. 14, ಶನಿವಾರದವರೆಗೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.