ಬೀರೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಕ್ಕಳ ತಜ್ಞರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಸೇವಾ ಕಾರ್ಯಕರ್ತರ ಸಂಘದ ಸದಸ್ಯರು ಶನಿವಾರ ಬೀರೂರಿನಿಂದ ಕಡೂರಿಗೆ ನಡಿಗೆ ಜಾಥಾ ನಡೆಸಿದರು.
ಶನಿವಾರ ಬೆಳಿಗ್ಗೆ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಂತರ ಕಡೂರಿಗೆ ತೆರಳಿದ ಕಾರ್ಯಕರ್ತರು, ಕಳೆದ ಫೆಬ್ರುವರಿ ತಿಂಗಳಿನಲ್ಲಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಪ್ರಯತ್ನಿಸಿಲ್ಲ ಎಂದು ಆರೋಪಿಸಿದರು.
ಮುಖಂಡ ಬಿ.ಎನ್.ಷಣ್ಮುಖಪ್ಪ ಮಾತನಾಡಿ ಪಟ್ಟಣದ ನಾಗರಿಕರು ಮಕ್ಕಳಿಗೆ ಅನಾರೋಗ್ಯ ಪರಿಸ್ಥಿತಿ ಎದುರಿಸಿದರೆ ಇಲ್ಲಿ ಚಿಕಿತ್ಸೆ ಲಭ್ಯವಿಲ್ಲದೆ ಗಡಿಬಿಡಿಯಲ್ಲಿ ಕಡೂರಿಗೆ ತೆರಳಬೇಕಿದ್ದು ಅನೇಕ ಬಾರಿ ತೊಂದರೆ ಎದುರಿಸಬೇಕಾಗುತ್ತದೆ. ಸಾರ್ವಜನಿಕ ಆಸ್ಪತ್ರೆಗೆ ಮಕ್ಕಳ ತಜ್ಞರ ನೇಮಕವಾದರೆ ಪೋಷಕರಿಗೆ ಧಾವಂತ ತಪ್ಪುತ್ತದೆ ಎಂದರು.
ಹೊರವಲಯದಲ್ಲಿ ತ್ರಿನೇತ್ರ ಚಿತ್ರಮಂದಿರದ ಬಳಿ ಬಸ್ ತಂಗುದಾಣ ನಿರ್ಮಿಸಿದ್ದರೂ ಬಸ್ ನಿಲುಗಡೆ ಆಗುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದರು.
ಜಾಥಾ ಮೂಲಕ ಕಡೂರಿಗೆ ತೆರಳಿ ತಹಶೀಲ್ದಾರ್ ಕಚೇರಿ ಶಿರಸ್ತೇದಾರ್ ತಿಮ್ಮೇಗೌಡ, ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ಮತ್ತು ತಾಲ್ಲೂಕು ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಬಿ.ಆರ್.ಹೇಮಂತ್, ಸಿ.ಆರ್.ವೀರಭದ್ರಪ್ಪ, ಮಲ್ಲಿಕಾರ್ಜುನ, ಬಿ.ಆರ್.ಬಾಲಕೃಷ್ಣ, ರಂಗನಾಥ, ಮಲ್ಲಿಕಾರ್ಜುನ ಇತರರು ಜಾಥಾದಲ್ಲಿ ಪಾಲ್ಗೊಂಡರು.