ಬೆಂಗಳೂರು: `ಮಕ್ಕಳು ದೇಶದ ಸಂಪತ್ತು. ಅವರಲ್ಲಿರುವ ಸತ್ವ ಹಾಗೂ ಪ್ರತಿಭೆಯನ್ನು ಬೆಳಕಿಗೆ ತರುವ ಕಾರ್ಯ ನಡೆಯಬೇಕು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಬಾಲ ಭವನ ಸೊಸೈಟಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಕಲಾಶ್ರೀ~ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ `ಕಲಾಶ್ರೀ~ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
`ಮಕ್ಕಳನ್ನು ಉತ್ತಮ ನಾಗರಿಕರಾಗಿ ಬೆಳೆಸುವ ಜವಾಬ್ದಾರಿ ಹಿರಿಯರ ಮೇಲಿದೆ. ಅವರು ದೇಶಕ್ಕೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಿದೆ. ಅವರ ಆಂತರಿಕ ಮತ್ತು ಸಾಮಾಜಿಕ ಶಕ್ತಿಯನ್ನು ಪರಿವರ್ತಿಸಲು ಮುಂದಾಗಬೇಕು~ ಎಂದು ತಿಳಿಸಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿ.ಎಸ್.ನಾಗಾಭರಣ, `ಮಕ್ಕಳು ಕೆಡುವ ವಾತಾವರಣ ಬಹಳಷ್ಟಿದೆ. ಒಮ್ಮೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಆರು ವರ್ಷದ ಮಗುವಿಗೆ ಏನು ಉಡುಗೊರೆ ಬೇಕು ಎಂದು ಪ್ರಶ್ನಿಸಿದೆ. ಬಂದೂಕು ಬೇಕು ಎಂದು ಮಗು ಹೇಳಿತು. ಏಕೆ ಎಂದು ಪ್ರಶ್ನಿಸಿದೆ. ನನ್ನ ಗುರುಗಳನ್ನು ಸುಡುವುದಕ್ಕೆ ಎಂದು ಉತ್ತರಿಸಿತು. ಮಕ್ಕಳಲ್ಲಿ ವಿಧ್ವಂಸಕ ಮನೋಭಾವ ಬೆಳೆಯುತ್ತಿರುವುದಕ್ಕೆ ಇದು ಉದಾಹರಣೆ~ ಎಂದು ಆತಂಕ ವ್ಯಕ್ತಪಡಿಸಿದರು.
`ಮಕ್ಕಳನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಗುರುಹಿರಿಯರನ್ನು ಗೌರವಿಸುವ ಪ್ರೀತಿಸುವ ಮನೋಭಾವ ಬೆಳೆಸಬೇಕು. ಅವರ ಒಳ್ಳೆಯತನವನ್ನು ಜಾಗೃತಗೊಳಿಸಬೇಕು~ ಎಂದು ಕಿವಿಮಾತು ಹೇಳಿದರು.
`ತುಂಬಾ ಮಕ್ಕಳಿಗೆ ಪ್ರಶಸ್ತಿ ದೊರೆಯದೆ ಇರಬಹುದು. ಆದರೆ ಅವರಿಗೆ ಪ್ರತಿಭೆ ಇಲ್ಲ ಎಂದಲ್ಲ. ಪ್ರಶಸ್ತಿ ಪಡೆಯದ ಪ್ರತಿಭಾವಂತ ಮಕ್ಕಳೇ ನಿಜವಾದ ಕಲಾಶ್ರೀಗಳು~ ಎಂದು ತಿಳಿಸಿದರು.
ಉಜಿರೆ ಧರ್ಮಸ್ಥಳ ಮಂಜುನಾಥ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಬಾಲಭವನ ಸೊಸೈಟಿಯ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಗಾಯಕ ಶಶಿಧರ್ ಕೋಟೆ ಮತ್ತಿತರರು ಉಪಸ್ಥಿತರಿದ್ದರು.
ಕಲಾಶ್ರೀ ಪ್ರಶಸ್ತಿ ಪಡೆದ ಚಿಣ್ಣರು
ಕಲೆ
ಎ.ಜೆ.ಎಸ್. ಲಕ್ಷ್ಮೀಶ್ರೀ - ಬೆಂಗಳೂರು ಉತ್ತರ
ಶುಭಂ ವರ್ಣೇಕರ್- ದಕ್ಷಿಣ ಕನ್ನಡ
ಆರಿಫ್ ಕೆ ಮುಲ್ಲಾ- ಬೆಳಗಾವಿ
ಬಿ. ತನುಶ್ರೀ- ಉಡುಪಿ
ಬರಹ
ಸಿ.ಎಸ್. ಶ್ರೀವತ್ಸ- ದಕ್ಷಿಣ ಕನ್ನಡ
ಶಾರದಾ ವಿ ಕುಲಕರ್ಣಿ- ಹಾವೇರಿ
ಎಸ್.ಪೂಜಿತಾ- ಬೆಂಗಳೂರು ಉತ್ತರ
ಸಂತೋಷಿ ಬಿ. ತುಂಬರಾ- ಬಿಜಾಪುರ
ವಿಜ್ಞಾನ
ಲಿತೇಶ್ ಎಸ್.ಬಂಗೇರ- ಉಡುಪಿ
ಸಚಿನಾ ಗಾಡಗೆ- ಬೀದರ್
ಕಿಶೋರಿ ಜಿ ಕರ್ವ- ಬಾಗಲಕೋಟೆ
ಡಿ.ವಿ.ಧನ್ಯಶ್ರೀ- ಮೈಸೂರು
ಪ್ರದರ್ಶನ ಕಲೆ
ದೀಪ್ತಿ ಆರ್ ಶೆಟ್ಟಿ- ಬೆಳಗಾವಿ
ಜ್ಞಾನ ಐತಾಳ್- ದಕ್ಷಿಣ ಕನ್ನಡ
ಅದಿತಿ ಅಶೋಕ್- ಬೆಂಗಳೂರು ಉತ್ತರ
ಹಾಸಿನಿ ಉಪಾಧ್ಯ- ಉಡುಪಿ
ಪ್ರಹ್ಲಾದ್ ಪಿ ಭಟ್- ಮೈಸೂರು
ಎಂ.ಎಸ್.ಸಂಜನಾ ರಾವ್- ಬೆಂಗಳೂರು ಉತ್ತರ
ಸರಸ್ವತಿ ಸಬರದ- ಬಾಗಲಕೋಟೆ
ಮಂಜುನಾಥ್ ಆರ್ ಮೇಟಿ- ಧಾರವಾಡ
ಕಲಾಧಾರಿ ಭವಾನಿ- ಬೆಂಗಳೂರು ಉತ್ತರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.