ಬೆಂಗಳೂರು: ಕೌಟುಂಬಿಕ ಕಾಯ್ದೆಗೆ ತಿದ್ದುಪಡಿ ತರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚೈಲ್ಡ್ ರೈಟ್ಸ್ ಇನಿಷಿಯೇಟಿವ್ ಫಾರ್ ಶೇರ್ಡ್ ಪೇರೆಂಟಿಂಗ್ (ಕ್ರಿಸ್ಪ್) ಸಂಸ್ಥೆಯ ಸದಸ್ಯರು ನಗರದ ಪುರಭವನದ ಬಳಿ ಶನಿವಾರ ಧರಣಿ ನಡೆಸಿದರು.
ವಿವಾಹ ವಿಚ್ಛೇದನದ ನಂತರ ಮಗುವಿನ ಸುಪರ್ದಿನ ವಿಷಯದಲ್ಲಿ ಕೌಟುಂಬಿಕ ಕಾಯ್ದೆಯು ಮಹಿಳೆಯರ ಪರವಾಗಿದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಹಿಳೆಯರನ್ನೇ ಬೆಂಬಲಿಸುತ್ತದೆ. ಇದರಿಂದಾಗಿ ಮಕ್ಕಳು ತಂದೆಯ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಧರಣಿ ನಿರತರು ದೂರಿದರು.
`ವಿಚ್ಛೇದನದ ಬಳಿಕ ಮಗುವಿನ ಸುಪರ್ದಿನ ವಿಷಯ ಬಂದಾಗ ಮಹಿಳೆಯರ ಹಕ್ಕುಗಳ ರಕ್ಷಣೆಗಷ್ಟೇ ಆದ್ಯತೆ ಸಿಗುತ್ತಿದೆ. ಆದರೆ, ಮಕ್ಕಳ ಹಕ್ಕುಗಳನ್ನು ನಿರ್ಲಕ್ಷಿಸಲಾಗುತ್ತಿದೆ~ ಎಂದು ಕ್ರಿಸ್ಪ್ ಅಧ್ಯಕ್ಷ ಕುಮಾರ್ ಜಹಗೀರ್ದಾರ್ ಹೇಳಿದರು.
ಕೌಟುಂಬಿಕ ನ್ಯಾಯಾಲಯಗಳಲ್ಲಿ ಮಗುವಿನ ಸುಪರ್ದಿನ ಪ್ರಕರಣಗಳ ವಿಚಾರಣೆ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಆದ್ದರಿಂದ ಇಂತಹ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಿ ಆದೇಶ ನೀಡಬೇಕು.
ಬಹುತೇಕ ವಿಚ್ಛೇದನ ಪ್ರಕರಣಗಳಲ್ಲಿ ತಂದೆಗೆ ಮಕ್ಕಳನ್ನು ಭೇಟಿ ಮಾಡಲು ವಾರಕ್ಕೆ ಕೇವಲ ಎರಡು ಗಂಟೆಗಳ ಕಾಲಾವಕಾಶ ನೀಡಲಾಗುತ್ತಿದೆ. ತಂದೆ ಮತ್ತು ಮಕ್ಕಳ ಭೇಟಿಗೆ ಶನಿವಾರ ಹಾಗೂ ಭಾನುವಾರವೂ ಅವಕಾಶ ಕಲ್ಪಿಸಿಕೊಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.