ನರಸಿಂಹರಾಜಪುರ: ಹದಿಹರೆಯದ ವಯಸ್ಸಿನಲ್ಲಿ ಕಿಶೋರಿಯರ ದೈಹಿಕ ಹಾಗೂ ಮಾನಸಿಕ ಬದಲಾವಣೆಯಾಗುವುದರಿಂದ ಅವರು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಪೌಷ್ಟಿಕಾಂಶ ಆಹಾರ ಒದಗಿಸುವುದು ಅವಶ್ಯಕ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಗುರುವಾರ ನಡೆದ ಪಟ್ಟಣದ ವ್ಯಾಪ್ತಿಯ ಅಂಗನವಾಡಿಗಳ ಬಾಲ ಮೇಳ ಮತ್ತು ಕಿಶೋರಿಯರ ದಿನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಾಜೇಂದ್ರ `ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಶಾಲಾ ಪೂರ್ವದಲ್ಲೇ ವೇದಿಕೆ ಕಲ್ಪಿಸಲು ಬಾಲಮೇಳ ಸಹಾಯಕವಾಗುತ್ತದೆ. ಸರ್ಕಾರ ಅಂಗನವಾಡಿಗಳ ಮೂಲಕ ಮಹಿಳೆಯರಿಗೆ ನೀಡುತ್ತಿರುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು' ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಜ್ಯೋತಿ ಲಕ್ಷ್ಮಿ ಮಾತನಾಡಿ, ಇದೇ 5ರಂದು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಎಲ್ಲ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ತಪಾಸಣೆ ನಡೆಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ಅಫ್ರೋಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದಸ್ಯರಾದ ರಾಜಶೇಖರ್, ಆಶೀಶ್ ಕುಮಾರ್, ರತ್ನಮ್ಮ, ಸಿಡಿಪಿಒ ಇಲಾಖೆಯ ಬಂಗಾರಿಹೆಗ್ಡೆ, ಆರೋಗ್ಯ ಇಲಾಖೆಯ ಪದ್ಮಾ, ಅಂಗನವಾಡಿ ಕಾರ್ಯಕರ್ತೆಯರಾದ ಜಯಂತಿ, ಅನುಸೂಯಾ, ಶಾರದಮ್ಮ ಇದ್ದರು.