ಸುಳ್ಯ: ಮಕ್ಕಳ ಭಾವನೆಗಳನ್ನು ಚಿವುಟಬಾರದು. ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಅವರ ಪ್ರತಿಭೆಯನ್ನು ಬೆಳಗಿಸುವ ಕಾರ್ಯ ಮಾಡಬೇಕಿದೆ. ಮಕ್ಕಳ ಭಾವನೆಗಳನ್ನು ಗೌರವಿಸಿ ಅವರ ಕನಸು ನನಸು ಮಾಡುವ ಕೆಲಸ ಮಾಡಬೇಕೆಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಹೇಳಿದ್ದಾರೆ.
ಬೆಳ್ಳಾರೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೆಜಿನಲ್ಲಿ ನಡೆದ ಸುಳ್ಯ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾ ಕಾರ್ಯಕ್ರಮವನ್ನು ಡೋಲು ಬಾರಿಸುವುದರ ಮೂಲಕ ತಾಲ್ಲೂಕು ಪಂಚಾಯಿತಿ ಸದಸ್ಯ ಅನಿಲ್ ರೈ ಉದ್ಘಾಟಿಸಿ ಶುಭಕೋರಿದರು.
ತಾ.ಪಂ. ಅಧ್ಯಕ್ಷ ಗುಣವತಿ ಕೊಲ್ಲಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ವಿಠಲ ದಾಸ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಯು.ಸುಬ್ರಾಯ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ನಂದಕುಮಾರ್ ಅತಿಥಿಗಳಾಗಿದ್ದರು.
ನೋಡೆಲ್ ಅಧಿಕಾರಿ ಪ್ರಕಾಶ್ ಮೂಡಿತ್ತಾಯ, ಪ್ರತಿಭಾ ಕಾರಂಜಿ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಶೈಲೇಶ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಮ ಅಮಳ ಸೇರಿದಂತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಚಂದ್ರಶೇಖರ ಪೇರಾಲು ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಾಂಶುಪಾಲೆ ಎಂ.ಟಿ.ವೀಣಾ ವಂದಿಸಿದರು. ಶಿಕ್ಷಕ ಮಹಾಬಲ ಕುಳ ನಿರೂಪಿಸಿದರು.