ಬೆಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಮಂಜಳ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರೊಂದಿಗೆ ಶನಿವಾರ ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ನಕ್ಸಲ್ ನಿಗ್ರಹ ಪಡೆಯ ಕಾನ್ಸ್ಟೇಬಲ್ ಮಹದೇವ ಎಸ್. ಮಾನೆ ಅವರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ನೆರವು ನೀಡಲಿದೆ ಎಂದು ಗೃಹ ಸಚಿವ ಆರ್. ಅಶೋಕ ಘೋಷಿಸಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮಾನೆ ಕುಟುಂಬದವರು ಈಗ ವಾಸಿಸುತ್ತಿರುವ ಸರ್ಕಾರಿ ನಿವಾಸದಲ್ಲೇ ಮುಂದೆಯೂ ವಾಸಿಸಲು ಅನುವು ಮಾಡಿಕೊಡಲಾಗುವುದು. ಅಲ್ಲದೆ, ಅವರ ಮಕ್ಕಳಿಗೆ ಸರ್ಕಾರಿ ಕೆಲಸ ನೀಡಲಾಗುವುದು~ ಎಂದು ಅಶೋಕ ಅವರು ಹೇಳಿದರು.