ಶಿಗ್ಗಾವಿ: ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಪರಿಪೂರ್ಣವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆ ಪಾಲಕ-ಶಿಕ್ಷಕರದಾಗಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ನಳಂದಾ ಶಿಕ್ಷಣ ಸಂಸ್ಥೆ ಶ್ರೀಮತಿ ರುದ್ರಮ್ಮ ಪಾಟೀಲ ಪೂರ್ಣ ಪ್ರಾಥಮಿಕ ಹಾಗೂ ಪ್ರೌಡ ಶಾಲೆ ಬೆಳ್ಳಿ ಮಹೋತ್ಸವ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನೂತನ ಕೊಠಡಿಗಳ ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಕ ಸಮೂಹದ ಪ್ರಾಮಾಣಿ ಕಾರ್ಯದಿಂದ ಸುಭದ್ರ ನಾಡುನಿರ್ಮಾಣವಾಗುವ ಮೂಲಕ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಹೀಗಾಗಿ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತೀ ಪ್ರಮುಖವಾಗಿದೆ. ಶಿಕ್ಷಕರು ತಮ್ಮ ಸೇವೆಯನ್ನು ಸಮಾಜ ಬೆಳವಣಿಗೆಗೆ ಮೀಸಲಾಗಿಡಬೇಕು ಎಂದು ಹೇಳಿದರು.
ಬೆಂಗಳೂರಿನ ಖ್ಯಾತ ವೈಮಾನಿಕ ವಿಜ್ಞಾನಿ ಡಾ.ಎಸ್. ಎಸ್.ದೇಸಾಯಿ ಮಾತನಾಡಿ, ಇಂದು ಕೇವಲ ಅಭಿವೃದ್ಧಿ ಕುರಿತು ಆಲೋಚನೆಗಳು ನಡೆಯುತ್ತಿವೆಯೇ ಹೊರತು, ಹಿಂದುಳಿದ ಶಿಕ್ಷಣ ಕ್ಷೇತ್ರಕ್ಕೆ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಚಿಂತನೆಗಳು ನಡೆಯತ್ತಿಲ್ಲ. ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನವಿಲ್ಲದೆ ಅಡ್ಡ ದಾರಿಯನ್ನು ಹಿಡಿಯುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಗತ್ತಿನ ಗಣಿತ ಲೋಕಕ್ಕೆ ಭಾರತ ದೇಶ ಅಪಾರ ಕೊಡುಗೆ ನೀಡಿದ್ದು, ಅದನ್ನು ಉಳಿಸಿಕೊಂಡು ಹೋಗುವಲ್ಲಿ ನಾವೆಲ್ಲ ವಿಫಲರಾಗಿದ್ದೆವೆ. ಅದಕ್ಕೆ ಇಂದಿನ ಶಿಕ್ಷಣ ಕುರಿತು ಆರೋಗ್ಯಕರ ಚಿಂತನೆಗಳು ನಡೆಯದಿರುವುದೇ ಮೂಲ ಕಾರಣವಾಗಿದೆ. ಜಗತ್ತಿನ ಗಣಿತ ಕ್ಷೇತ್ರದಲ್ಲಿ ಈ ಹಿಂದೆ ಭಾರತ ಅಗ್ರ ಸ್ಥಾನದಲ್ಲಿತ್ತು. ಆದರೆ ಇಂದು ಗಣಿತ ಸೇರಿದಂತೆ ವಿಜ್ಞಾನ ಕ್ಷೇತ್ರದಲ್ಲೂ ಸಹ ನಮ್ಮ ವಿದ್ಯಾರ್ಥಿಗಳು ಹಿಂದೆ ಬಿಳುತ್ತಿದ್ದಾರೆ ಎಂದು ಹೇಳಿದರು.
ನಳಂದಾ ಸಂಸ್ಥೆ ಅಧ್ಯಕ್ಷ ಡಾ.ಪಿ.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಸೊಮಣ್ಣ ಬೇವಿನಮರದ, ತಾ.ಪಂ.ಅಧ್ಯಕ್ಷ ವೀರನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ರಾಮಣ್ಣ ವಡ್ಡರ, ಜಿ.ಪಂ.ಸದಸ್ಯರಾದ ಬಿ.ಟಿ.ಇನಾಮತಿ,ಸರೋಜವ್ವ ಆಡಿನ, ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ ಬೊಮ್ಮನಹಳ್ಳಿ, ಪುರಸಭೆ ಉಪಾಧ್ಯಕ್ಷೆ ಜಯಶೀಲಾ ಶ್ಯಾಡಂಬಿ, ತಾಪಂ.ಸದಸ್ಯರಾದ ತಿಪ್ಪಣ್ಣ ಸಾತಣ್ಣನವರ, ನಿಂಗಪ್ಪ ಜವಳಿ, ನಿಂಗಪ್ಪ ಹರಿಜನ, ಸುಜತಾ ಕಲಕಟ್ಟಿ, ಲಕ್ಷ್ಮವ್ವ ತೋಟದ, ಉಷಾ ಬಿಳೆಕುದರಿ, ಉಮಾ ಡವಗಿ, ಫರಿದಾಬಾನು ಶೇಖಸನದಿ, ಕಸಾಪ ಅಧ್ಯಕ್ಷ ಶಂಕರಗೌಡ್ರ ಪಾಟೀಲ, ಸಾಹಿತಿ ಶಿವಾನಂದ ಮ್ಯಾಗೇರಿ, ಟಿ.ವಿ.ಸುರಗಿಮಠ, ಬಿ.ಜಿ.ಖುರ್ಸಾಪುರ, ಡಾ.ಐ.ಪಿ.ಕೆ.ಶೆಟ್ಟರ, ವಿ.ವಿ.ಕುರ್ತಕೋಟಿ, ಎಸ್.ಎಚ್.ಪಾಟೀಲ, ಎಮ್.ಎಸ್.ಕರಡಿ, ಎಸ್.ಜಿ.ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು. ನಳಂದಾ ಸಂಸ್ಥೆ ಕಾರ್ಯದರ್ಶಿ ಎಫ್.ಸಿ.ಪಾಟೀಲ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಂ.ಬಿ.ಹಳೇಮನಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.