ಮೂಡಿಗೆರೆ: ಮಕ್ಕಳಿಗಾಗಿ ಸಂವಿಧಾನ ವಿವಿಧ ಹಕ್ಕುಗಳನ್ನು ನೀಡಿದ್ದು, ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು ಮತ್ತು ಅವರನ್ನು ಶಿಕ್ಷಣ ವಂಚಿತರನ್ನಾಗಿ ಸುವುದು ಅಪ ರಾಧ. ಈಬಗ್ಗೆ ಪೋಷಕರು ಅರಿವು ಮೂಡಿಸಿಕೊಳ್ಳುವುದು ಅಗತ್ಯ ಎಂದು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಜಿ.ಸಲಗೆರೆ ಹೇಳಿದರು.
ಇಲ್ಲಿನ ಬಾಲಕಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕರನ್ನು ದುಡಿಮೆಗೆ ಕಳುಹಿಸುವುದು ಮತ್ತು ದುಡಿಯಲು ಬಳಕೆ ಮಾಡಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ. 14ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರಿಗಾಗಿ ಇರುವ ಹಕ್ಕುಗಳ ರಕ್ಷಣೆ ಮಾಡಿ ಕೊಡುವುದು ಅಗತ್ಯ ಎಂದರು.ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಯಾವುದೇ ಉದ್ದಮೆಗಳು ಬಾಲಕಾರ್ಮಿ ಕರನ್ನು ನೇಮಿಸಿಕೊಂಡರೆ ಕಾನೂನಿನ ಪ್ರಕಾರ ಅಪರಾಧ ಮಾಡಿದಂತೆ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷೆ ಕೆ.ವಿಶಾಲ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಪೋಷಕರು ಆರೋಗ್ಯ ಹಾಗೂ ಉತ್ತಮ ಶಿಕ್ಷಣ ಕೊಡಿಸುವುದು ಕಾನೂನಿನ ಆಶಯ ಎಂದರು.
ವಕೀಲ ಎಚ್.ಕೆ.ರಘು ಮಾತನಾಡಿ, ಮಕ್ಕಳಿಗೆ ಬಾಲನ್ಯಾಯ ಮಂಡಲಿ ಮಹತ್ವವನ್ನು ತಿಳಿಸಿದರು. ಶಿಕ್ಷಣ ಸಂಯೋಜಕ ಧರ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವಕೀಲ ಸಿದ್ದಯ್ಯ, ಮುಖ್ಯಶಿಕ್ಷಕಿ ಪುಷ್ಪಾವತಿ, ವಕೀಲರ ಸಂಘದ ಕಾರ್ಯದರ್ಶಿ ಬಿ.ಟಿ.ನಟರಾಜ್ ಇದ್ದರು.