ಚಿಟಗುಪ್ಪಾ: ಶಾಲಾ ಮಕ್ಕಳಿ ಕೈಯಿಂದ ಕೂಲಿ ಕಾರ್ಮಿಕರಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸಸಿ ನೆಡೆಸಿದ ಘಟನೆ ಹುಮನಾಬಾದ್ ತಾಲ್ಲೂಕಿನ ಚಾಂಗಲೇರಾ ಗ್ರಾಮದಲ್ಲಿ ಈಚೆಗೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಇಲಾಖೆಯ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ಕರೆದುಕೊಂಡು ಬಂದು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಹಣ 60 ರೂಪಾಯಿ ಪಾವತಿಸಿ, ಸಸಿಗಳು ನೆಡಿಸುವ ಕಾರ್ಯ ಕೈಗೊಂಡಿದ್ದಾರೆ.
ಚೌಕಿ ತಾಂಡ, ಗುಡು ತಾಂಡ, ಗೋವಿಂದ ತಾಂಡ, ಚಾಂಗಲೇರಾ ಗ್ರಾಮಗಳಿಂದ ನೂರಾರು ಶಾಲಾ ಮಕ್ಕಳಿಗೆ ಟ್ರ್ಯಾಕ್ಟರ್ ನಲ್ಲಿ ಕೂಡಿಸಿಕೊಂಡು ಉಪ ವಲಯ ಅರಣ್ಯ ಅಧಿಕಾರಿ ರಘುನಾಥ ರಾಠೋಡ್ ಎಂಬುವರು ಕರೆದುಕೊಂಡು ಬಂದು ಕಡಿಮೆ ಹಣ ಪಾವತಿಸಿ ಸಸಿಗಳನ್ನು ನೆಡಿಸುವ ಕಾರ್ಯ ನಡೆಸಿದ್ದಾರೆ.
ಈ ಬಗ್ಗೆ ಹುಮನಾಬಾದ್ ವಲಯ ಅರಣ್ಯ ಅಧಿಕಾರಿ ಎ.ಬಿ.ಪಾಟೀಲ್ ಅವರಿಗೆ ಪ್ರಜಾವಾಣಿ ಸ್ಪಷ್ಠಿಕರಣ ಕೇಳಿದಕ್ಕೆ, ಮಕ್ಕಳಿಗೆ ಇಲಾಖೆಯ ಸಿಬ್ಬಂದಿ ಸಸಿ ನೆಡಲು ಕರೆದುಕೊಂಡು ಬಂದಿರುವುದಿಲ್ಲ, ಅವರ ತಾಯಂದಿರು ಸಸಿ ನೆಡಲು ಬಂದಾಗ ಅವರ ಜೊತೆಗೆ ಮಕ್ಕಳು ಬಂದು ಸಸಿ ನೆಟ್ಟಿದ್ದಾರೆ. ಈಗಾಗಲೇ ಉಪ ವಲಯ ಅರಣ್ಯ ಅಧಿಕಾರಿ ರಾಠೋಡ ಅವರಿಗೆ ಈ ಘಟನೆಯಿಂದ ಬೇರೆಡೆಗೆ ವರ್ಗ ಮಾಡಲಾಗಿದೆ ಎಂದು ಸ್ಪಷ್ಠನೆ ನೀಡಿದ್ದಾರೆ.