ಚಿಕ್ಕಬಳ್ಳಾಪುರ: ಮಕ್ಕಳನ್ನು ಬೌದ್ಧಿಕ ಚಟುವಟಿಕೆಗೆ ಮಾತ್ರವೇ ಸೀಮಿತಗೊಳಿಸದೇ ಕ್ರೀಡಾ ಚಟುವಟಿಕೆಗಳ ಕಡೆಗೂ ಗಮನಹರಿಸುವಂತೆ ಮಾಡುವಲ್ಲಿ ಪೋಷಕರು ಮತ್ತು ಶಿಕ್ಷಕರದ್ದು ಪ್ರಮುಖ ಪಾತ್ರವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಪ್ರಸಾದ್ ತಿಳಿಸಿದರು.
ನಗರದ ಹೊರವಲಯದ ಕೆ.ವಿ.ಶಿಕ್ಷಣ ಸಂಸ್ಥೆಯ ಆವರಣದಲ್ಲಿನ ಕೆ.ವಿ.ಇಂಗ್ಲಿಷ್ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಬೌದ್ಧಿಕವಾಗಿ ಅಲ್ಲದೇ ದೈಹಿಕವಾಗಿಯೂ ಪ್ರತಿಭಾವಂತರಾಗಿರುತ್ತಾರೆ. ಅವರನ್ನು ಬೌದ್ಧಿಕವಾಗಿ ಮಾತ್ರವೇ ಅಳೆಯದೇ ಇತರೆ ಕ್ಷೇತ್ರಗಳಲ್ಲೂ ಆಸಕ್ತಿಯಿಂದ ತೊಡಗಿಕೊಳ್ಳುವಂತೆ ಸ್ಪೂರ್ತಿ ತುಂಬಬೇಕು ಎಂದರು.
ಕೆ.ವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ನಮ್ಮ ದೇಶದ ಜನಸಂಖ್ಯೆ ನೂರು ಕೋಟಿ ದಾಟಿದ್ದರೂ ಕ್ರೀಡೆಯಲ್ಲಿ ಮಾತ್ರ ನಾವು ತುಂಬ ಹಿಂದೆ ಉಳಿದಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಂಡರೂ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಒಂದೊಂದು ಪದಕ ಗೆಲ್ಲಲು ಸಹ ತುಂಬ ಶ್ರಮವಹಿಸಬೇಕು ಎಂದರು.
ಕೆ.ವಿ ಇಂಗ್ಲಿಷ್ ಶಾಲೆಯ ಪ್ರಾಂಶುಪಾಲ ತ್ಯಾಗರಾಜ್ ಮಾತನಾಡಿದರು. ಡಾ.ರಜನಿ ವಿಶಾಲ್, ಸುಜಾತಾ ಕಿರಣ್, ಪಿಪಿಎಚ್ಎಸ್ ಶಾಲೆಯ ಮುಖ್ಯಶಿಕ್ಷಕಿ ಉಷಾ ಮಕರಂದಂ, ಕೆ.ವಿ.ಟ್ರಸ್ಟ್ ಸದಸ್ಯರಾದ ಬಿ.ಮುನಿಯಪ್ಪ, ಕೊಂಡಪ್ಪ, ಸಾಲಾರ್ಸಾಬ್, ಶಿಕ್ಷಕರಾದ ಗಿರೀಶ್, ಸೋಮಶೇಖರ್, ಧನಲಕ್ಷ್ಮೀ ಉಪಸ್ಥಿತರಿದ್ದರು.