`ಮಕ್ಕಳ ಚಿತ್ರಗಳನ್ನು ಮಾಡುವಾಗ ಕೊಂಚ ಎಚ್ಚರ ತಪ್ಪಿದರೂ ಅದು ಬಾಲಕರ ಚಿತ್ರವಾಗುವ ಬದಲು ಬಾಲಿಶ ಚಿತ್ರವಾಗುವ ಸಾಧ್ಯತೆ ಇರುತ್ತದೆ~. ಇದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಿವಿಮಾತು. `ಬಣ್ಣದ ಕೊಡೆ~ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರ ಈ ಮಾತು, ಇತ್ತೀಚಿನ ಮಕ್ಕಳ ಚಿತ್ರಗಳ ಕುರಿತಾದ ವಿಮರ್ಶೆಯಂತೆಯೂ ಇತ್ತು.
`ಬಣ್ಣದ ಕೊಡೆ~ ಚಿತ್ರದ ನಿರ್ಮಾಪಕ ಹರೀಶ್ ಅವರಿಗೆ, ತಮ್ಮ ಚಿತ್ರಕ್ಕೆ ಸೆನ್ಸಾರ್ ಮಂಡಳಿ `ಯು~ ಪ್ರಮಾಣಪತ್ರ ನೀಡಿದ ಬಗ್ಗೆ ಬೇಸರವಿತ್ತು. `ಇದು ಮಕ್ಕಳೊಂದಿಗೆ ಪೋಷಕರೂ ನೋಡಿ ಮೆಚ್ಚುವ ಸಿನಿಮಾ~ ಎಂದವರು ಹೇಳಿದರು.
ಚಿತ್ರತಂಡಕ್ಕೆ ಶುಭ ಹಾರೈಸಲು ಬಂದಿದ್ದ ಮತ್ತೊಬ್ಬ ಅತಿಥಿ, ಸಂಗೀತ ನಿರ್ದೇಶಕ ಗುರು ಕಿರಣ್, ಚಿತ್ರದ ನಾಯಕ ರೋಹಿತ್ ಕುಮಾರ್ ಕಟೀಲ್ ಅವರೊಂದಿಗಿನ ತಮ್ಮ ಬಾಲ್ಯದ ಗೆಳೆತನ ನೆನಪಿಸಿಕೊಂಡರು. ರೋಹಿತ್ ಆಹ್ವಾನದ ಮೇರೆಗೆ ಸಮಾರಂಭಕ್ಕೆ ಬಂದಿದ್ದಾಗಿ ಹೇಳಿದ ಗುರು, ತಮ್ಮ ಗೆಳೆಯ ಕ್ರೀಡಾರಂಗದಲ್ಲಿ ಮಾಡಿದ ಸಾಧನೆಗಿಂತ ಹೆಚ್ಚಿನದನ್ನು ಚಿತ್ರರಂಗದಲ್ಲೂ ಮಾಡಲಿ ಎಂದು ಆಶಿಸಿದರು.
ನಿರ್ದೇಶಕ ಕೃಷ್ಣ ಬೆಳ್ತಂಗಡಿ ಅವರು ತಮ್ಮ ಸಿನಿಮಾ ಮಕ್ಕಳ ಸಿನಿಮಾದ ಬದಿಯಲ್ಲಿ ನಿಂತಿದೆ ಎಂದರು. `ಯತಿರಾಜ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲಾ ಹೊಸಬರು. ಎತ್ತರದ ಜಿಗಿತದಲ್ಲಿ ಏಷ್ಯಾದಲ್ಲಿಯೇ ಎರಡನೇ ವ್ಯಕ್ತಿ ಎನಿಸಿಕೊಂಡಿರುವ ರೋಹಿತ್ ಕುಮಾರ್ ಕಟೀಲ್ ಚಿತ್ರದ ನಾಯಕ. ಸಿನಿಮಾದ ಕೇಂದ್ರ ಬಿಂದು ಸುಹಾಸಿನಿ. ಆಕೆಯ ನಟನೆ ಅದ್ಭುತ. ಮಕ್ಕಳ ಆಸೆಗೆ ಪೋಷಕರು ನೀರೆರೆಯಬೇಕು ಎಂಬ ಸಂದೇಶ ಚಿತ್ರದಲ್ಲಿದೆ~ ಎಂದು ಕೃಷ್ಣ ತಮ್ಮ ಚಿತ್ರದ ಬಗ್ಗೆ ವಿವರ ನೀಡಿದರು.
ನಾಯಕ ರೋಹಿತ್ ಅವರಿಗೆ ನಿರೀಕ್ಷೆಗಿಂತ ಸಿನಿಮಾ ಚೆನ್ನಾಗಿ ಸಿದ್ಧವಾಗಿರುವುದು ಖುಷಿ ನೀಡಿದೆ. ಯತಿರಾಜ್, ಶರಣ್ಯ, ಸುಹಾಸಿನಿ, ಮೋಹಿನಿ ಅವರ ನಟನೆಯನ್ನು ಅವರು ಮೆಚ್ಚಿಕೊಂಡರು. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಯತಿರಾಜ್- `ಸುಹಾಸಿನಿ ನಟನೆ ಚೆನ್ನಾಗಿದೆ. ಪಾತ್ರಗಳ ಆಶಯಗಳನ್ನು ಚಿತ್ರದಲ್ಲಿ ಸಮರ್ಥವಾಗಿ ತೋರಿಸಲಾಗಿದೆ~ ಎಂದರು.
ಕೊಂಕಣಿ ಚಿತ್ರದ ನಿರ್ದೇಶಕ ರಮೇಶ್, `ಲಹರಿ~ ಸಂಸ್ಥೆಯ ವೇಲು ಕಾರ್ಯಕ್ರಮದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.