ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯೇ?

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಸಮಾಜದಲ್ಲಿ ಹೆಚ್ಚು ನಿರ್ಲಕ್ಷ್ಯ ಹಾಗೂ ದೌರ್ಜನ್ಯಕ್ಕೆ ಒಳಗಾಗುವವರು ಮಕ್ಕಳು. ಲೈಂಗಿಕ ಕಿರುಕುಳಕ್ಕೆ ಒಳಗಾಗುವ, ಪರಿತ್ಯಜಿಸಲ್ಪಡುವ, ಬಾಲಕಾರ್ಮಿಕರಾಗುವ, ಶಾಲೆಯ ಮೆಟ್ಟಿಲನ್ನೇ ಹತ್ತದ, ಕುಟುಂಬ ಮತ್ತು ಪೋಷಕರಿಂದ ದುರುಪಯೋಗಕ್ಕೆ ಒಳಗಾಗುವ, ದತ್ತು ಹೋಗುವ, ಸಾಗಣೆಗೆ ಒಳಗಾಗುವ, ಮೋಸ ಹೋಗುವ, ಕಳೆದು ಹೋದ, ಪೊಲೀಸರಿಗೆ ಸಿಕ್ಕಿರುವ, ಮಾದಕ ವಸ್ತುಗಳಿಗೆ, ಎಚ್‌ಐವಿ, ಏಡ್ಸ್ ಮುಂತಾದ ಭೀಕರ ರೋಗಕ್ಕೆ ತುತ್ತಾಗುವ ಇಂತಹ ಅಸಂಖ್ಯ ಮಕ್ಕಳನ್ನು ನಮ್ಮ ಸುತ್ತ ನೋಡುತ್ತೇವೆ.

 ಈ ವಿಷಮ ಪರಿಸ್ಥಿತಿಗೆ ಅವರ ಮುಗ್ಧತೆ ಹಾಗೂ ಅಸಹಾಯಕತೆಯೇ ಕಾರಣ. ಇತ್ತೀಚೆಗಷ್ಟೇ ನಾವು, ಮಕ್ಕಳನ್ನೂ ವ್ಯಕ್ತಿಗಳಂತೆ ಕಾಣಬೇಕು, ಅವರಿಗೂ ಹಿರಿಯರಿಗಿರುವಂತೆಯೇ ಸಂವಿಧಾನಾತ್ಮಕವಾದ ಹಕ್ಕುಗಳಿವೆ ಎಂದು ಅರಿಯಲು ಪ್ರಾರಂಭಿಸಿದ್ದೇವೆ. ಬೆಳಕಿಗೇ ಬರದೇ, ಎಲ್ಲಿಯೂ ದಾಖಲಾಗದೇ ಹೋಗುತ್ತಿದ್ದ ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ ಕೆಲವಾದರೂ, ಇಂದು ನ್ಯಾಯಕ್ಕಾಗಿ ಕೋರ್ಟಿನ ಮೆಟ್ಟಿಲೇರುತ್ತಿವೆ. ಆದರೆ ದೊಡ್ಡವರ ಈ ಪ್ರಪಂಚದಲ್ಲಿ ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.     

 ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 2,448 ಮಕ್ಕಳ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 714 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ.

ಮಕ್ಕಳಿಗೆ ತುರ್ತು ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಕ್ಕಳಿಗಾಗಿಯೇ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಇತ್ತೀಚೆಗೆ ಹೈಕೋರ್ಟ್ ಸರ್ಕಾರಕ್ಕೆ  ಆದೇಶ ನೀಡಿದೆ. ಇದೊಂದು ಸ್ವಾಗತಾರ್ಹ ವಿಚಾರ. ಸ್ಕಾಟ್ಲೆಂಡಿನಲ್ಲಿ 1996ರಲ್ಲಿ ಪ್ರಥಮ ಮಕ್ಕಳ ನ್ಯಾಯಾಲಯ ಸ್ಥಾಪನೆಯಾದ ನಂತರ ಅನೇಕ ದೇಶಗಳಲ್ಲಿ ಇಂತಹ ವಿಶೇಷ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. 

ಕೇಂದ್ರ ಸರ್ಕಾರವು 2005 ರಲ್ಲೇ ಮಕ್ಕಳ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಆದರೆ ಈ ಆದೇಶವನ್ನು ಎಲ್ಲ ರಾಜ್ಯಗಳೂ ಕಳೆದ ಐದು ವರ್ಷಗಳಿಂದ ಉಲ್ಲಂಘಿಸುತ್ತಲೇ ಬಂದಿವೆ!

ಕಳೆದ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್, ತುರ್ತಾಗಿ ದೆಹಲಿಯಲ್ಲಿ ಮಕ್ಕಳ ನ್ಯಾಯಾಲಯ ಸ್ಥಾಪಿಸಲು ಆದೇಶ ನೀಡಿತ್ತು. ಅದು ಕಾರ್ಯಗತಗೊಂಡಿದ್ದರೆ, ದೇಶದಲ್ಲೇ ಮೊದಲ ಮಕ್ಕಳ ನ್ಯಾಯಾಲಯ ಅಲ್ಲಿ ಸ್ಥಾಪನೆಯಾಗುತ್ತಿತ್ತು. ಆದರೆ, ದೇಶಕ್ಕೇ ಹೊಸದಾಗಿರುವ ಈ ಮಕ್ಕಳ ನ್ಯಾಯಾಲಯದ ಪರಿಕಲ್ಪನೆಯ ನೀಲಿ ನಕಾಶೆಯೇ ಈವರೆಗೆ ಸಿದ್ಧಗೊಂಡಿಲ್ಲ! 

 ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು 2011-12 ನೇ ವರ್ಷವನ್ನು ಮಕ್ಕಳ ಹಕ್ಕುಗಳ ವರ್ಷ ಎಂದು ಘೋಷಿಸಿದೆ. ಈಗಾಗಲೇ ದೇಶದಲ್ಲಿ `ಮಕ್ಕಳ ನ್ಯಾಯ ಪೋಷಣೆ ಮತ್ತು ರಕ್ಷಣೆ~ ಕಾಯ್ದೆ 2000ರಲ್ಲಿಯೇ ರಚನೆಯಾಗಿದೆ. ಈ ಕಾಯ್ದೆ ಕುರಿತು ಕರ್ನಾಟಕವು 2002ರಲ್ಲಿ ನಿಯಮವನ್ನು ಜಾರಿಗೆ ತಂದು, ಮಕ್ಕಳ ರಕ್ಷಣೆಗೆ ಬದ್ಧವಾಗಿರುವ ಸಂಕಲ್ಪ ಮಾಡಿದೆ.

ಇದರ ಒಂದು ಭಾಗವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು 2009ರ ಜುಲೈನಲ್ಲಿ ರಚಿಸಿದೆ. `ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗಗಳು ಕಾಯಿದೆ 2005~ರ ಅಡಿಯಲ್ಲಿನ ಸ್ವತಂತ್ರ ಶಾಸನಬದ್ಧ ಅಂಗಸಂಸ್ಥೆಯಾಗಿರುವ ಈ ಆಯೋಗವು ಭಾರತ ಸಂವಿಧಾನ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989ರಲ್ಲಿ ಸ್ಪಷ್ಟಪಡಿಸಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಬೆಂಬಲ ನೀಡಲೆಂದೇ ರೂಪುಗೊಂಡಿದೆ. 

 ಇದರ ಜೊತೆಗೆ ಮಕ್ಕಳ ಪೋಷಣೆ, ರಕ್ಷಣೆ ಮತ್ತು ಕಾನೂನಿನ ನೆರವಿನ ದೃಷ್ಟಿಯಿಂದ ಶಾಸನಬದ್ಧವಾದ ನ್ಯಾಯವನ್ನು ಒದಗಿಸಲು ಕರ್ನಾಟಕ `ಮಕ್ಕಳ ಕಲ್ಯಾಣ ಸಮಿತಿ~ಗಳನ್ನು 2003ರಲ್ಲಿಯೇ ನೇಮಿಸಿದೆ. ಈ ಸಮಿತಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪ್ರತಿ ಜಿಲ್ಲೆಯಲ್ಲಿವೆ.

ಇದರಲ್ಲಿ 0-18 ವರ್ಷದವರೆಗಿನ ಮಕ್ಕಳು ಯಾವುದೇ ತಾರತಮ್ಯವಿಲ್ಲದಂತೆ ಪೋಷಣೆ, ರಕ್ಷಣೆ ಮತ್ತು ನ್ಯಾಯದ ನೆರವನ್ನು ಪಡೆಯುವ ಅವಕಾಶವಿದೆ. ಈ ಮಕ್ಕಳ ನ್ಯಾಯ ಮಂಡಳಿಯು ಮಕ್ಕಳ ನ್ಯಾಯ ಕಾಯ್ದೆಯ ಒಂದು ಅಂಗವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಇದರ ಮುಖ್ಯಸ್ಥರು ನ್ಯಾಯಾಧೀಶರಾಗಿದ್ದು, ಪ್ರಕರಣಗಳನ್ನು ನಡೆಸಲು ಇಬ್ಬರು ಸಮಾಜಸೇವಾ ಕಾರ್ಯಕರ್ತರಿರುತ್ತಾರೆ. ಜೊತೆಗೆ ಪದವಿ ಹೊಂದಿದ ಒಬ್ಬ ಅಧ್ಯಕ್ಷರು ಹಾಗೂ ಐವರು ಸದಸ್ಯರನ್ನೊಳಗೊಂಡ ಸಮಿತಿಯೂ ಕಾರ್ಯನಿರ್ವಹಿಸಬೇಕಿದೆ.

  ಮಕ್ಕಳ ಹಿತರಕ್ಷಣೆಗಾಗಿಯೇ ಈ ಎಲ್ಲಾ ಸರ್ಕಾರಿ ಇಲಾಖೆ, ಆಯೋಗ, ಸಮಿತಿಗಳು ಇರುವಾಗ ಮತ್ತೆ ಪ್ರತ್ಯೇಕ, ವಿಶೇಷ ನ್ಯಾಯಾಲಯದ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆ ಹಲವರದು. ಆದರೆ ಇವೆಲ್ಲ ಇದ್ದೂ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ.

ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದು 25 ವರ್ಷಗಳೇ ಆಗಿದ್ದರೂ ಕರ್ನಾಟಕದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿನ ಬಾಲಕಾರ್ಮಿಕರಿರುವರೆಂದು ಬೆಂಗಳೂರಿನ `ಬಾಲ ಕಾರ್ಮಿಕ ವಿರೋಧಿ ಆಂದೋಲನ~ದ ವರದಿ ತಿಳಿಸುತ್ತದೆ. ಆದರೆ ಕಾಯ್ದೆಯಡಿ ಇದುವರೆಗೆ ದಾಖಲಾಗಿರುವುದು ಕೇವಲ 446 ಪ್ರಕರಣಗಳು! ಅದರಲ್ಲಿ ಶಿಕ್ಷೆಗೆ ಒಳಗಾದವರು ಒಬ್ಬರು ಮಾತ್ರ! ಇದು ನಮ್ಮ ನ್ಯಾಯ ವ್ಯವಸ್ಥೆಗೆ ಹಿಡಿದ ಕನ್ನಡಿ.
 
ಮಕ್ಕಳ ದೌರ್ಜನ್ಯದ ಕ್ಷೇತ್ರ ಅತ್ಯಂತ ವಿಸ್ತಾರವಾದುದು. ಈ ಎಲ್ಲ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ರೂಪುಗೊಂಡಿರುವ ವ್ಯವಸ್ಥೆಯ ಪರಿಧಿಯಾಚೆಗೇ ಇಂದಿಗೂ ಅಸಂಖ್ಯಾತ ಮಕ್ಕಳು ನಿತ್ಯ ಶೋಷಣೆಗೆ, ಸಂಕಷ್ಟಗಳಿಗೆ ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಗುರಿಯಾಗುತ್ತಲೇ ಇದ್ದಾರೆ.

ಮಕ್ಕಳ ಸಂಬಂಧಿತ ಈ ಎಲ್ಲ ಸಂಸ್ಥೆಗಳು ಕ್ರಿಯಾಶೀಲವಾಗದೆ, ವಿಕೇಂದ್ರಿಕರಣಗೊಳ್ಳದೆ, ಅಧಿಕಾರಿಗಳ, ಸಿಬ್ಬಂದಿಯ ನಿರ್ಲಕ್ಷ್ಯ, ನಿಷ್ಕ್ರಿಯತೆಗೆ ಒಳಗಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳೊಂದಿಗಿನ ನೇರ ಸಂಪರ್ಕದ ಕ್ಷೇತ್ರಕಾರ್ಯ ಮಾಡದೆ, ಮಕ್ಕಳ ಮನಸ್ಸಿನ ಸೂಕ್ಷ್ಮಗಳನ್ನರಿಯದೆ ನಿರೀಕ್ಷಿತ ಪ್ರಮಾಣದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

 ಬಹಳಷ್ಟು ಬಾರಿ ಜಾತಿ ಹಾಗೂ ಸ್ಥಳೀಯ ರಾಜಕಾರಣದ ಪ್ರಭಾವ ಮತ್ತು ಒತ್ತಡದಲ್ಲಿ ಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ತಾರತಮ್ಯ ಹಾಗೂ ಲೋಪ ಉಂಟಾಗುತ್ತಿದೆ.ಪ್ರಕರಣ ದಾಖಲಾಗಿದ್ದರೂ, ಆಗದಿದ್ದರೂ ತೊಂದರೆಯಲ್ಲಿರುವ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ, ಅದನ್ನು ಅತ್ಯಂತ ಸೂಕ್ಷ್ಮವಾಗಿ ಇತ್ಯರ್ಥಗೊಳಿಸಿ ನ್ಯಾಯ ನೀಡುವ ವ್ಯವಸ್ಥೆಯನ್ನು ತುರ್ತಾಗಿ ಪುನರ್‌ರೂಪಿಸಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT