ರಾಮನಗರ: ಮಗ ಮತ್ತು ಸೊಸೆ ಕೊಡುವ ಮಾನಸಿಕ ಮತ್ತು ದೈಹಿಕ ಕಿರುಕುಳದಿಂದ ಬೇಸತ್ತ ತಾಯಿ ನೇಣಿಗೆ ಶರಣಾಗಿ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ಕೂಟಗಲ್ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಮಗ ಮತ್ತು ಸೊಸೆ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಕೂಟಗಲ್ ನಿವಾಸಿ ಸರೋಜಮ್ಮ (65) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇವರ ಮಗಳಾದ ರಾಜೇಶ್ವರಿ ಎಂಬುವರು ತನ್ನ ಅಣ್ಣ ಕೃಷ್ಣೇಗೌಡ ಮತ್ತು ಅತ್ತಿಗೆ ಪಾರ್ವತಮ್ಮ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಣ್ಣ ಮತ್ತು ಅತ್ತಿಗೆ ಇಬ್ಬರೂ ತಾಯಿ ರಾಜೇಶ್ವರಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು.
ಈ ಸಂಬಂಧ 6 ತಿಂಗಳ ಹಿಂದೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ರಾಜೀ ಪಂಚಾಯಿತಿ ನಡೆದಿತ್ತು. ಆದರೂ ಇವರು ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ ಎಂದು ರಾಜೇಶ್ವರಿ ದೂರಿದ್ದಾರೆ.
ಎಂದಿನಂತೆ ಗುರುವಾರ ಸಂಜೆ ಕೂಡ ತಾಯಿಗೆ ಮಗ ಮತ್ತು ಸೊಸೆ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಸರೋಜಮ್ಮ ಗ್ರಾಮದಲ್ಲಿನ ತನ್ನ ಸಹೋದರಿ ಜಯಮ್ಮ ಮನೆಗೆ ಹೋಗಿ ಅಳುತ್ತಾ ಈ ಸಮಸ್ಯೆ ಹೇಳಿಕೊಂಡಿದ್ದಾರೆ. ನಂತರ ರಾತ್ರಿ ಮನೆಗೆ ಬಂದು ಬಾಗಿಲು ಹಾಕಿ ಕೊಂಡು ಸೀರೆಯ ನೆರವಿನಿಂದ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸರೋಜಮ್ಮ ಅವರ ಶವ ಪರೀಕ್ಷೆ ನಡೆಸಿ ಮಗಳಾದ ರಾಜೇಶ್ವರಿ ಅವರಿಗೆ ಶವ ಒಪ್ಪಿಸಿದ್ದಾರೆ. ಅಲ್ಲದೆ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.