ಜೈಪುರ (ಐಎಎನ್ಎಸ್): ತನ್ನ ಎರಡು ವರ್ಷದ ಪಾರ್ಶ್ವವಾಯು ಪೀಡಿತ ಮಗನ ಚಿಕಿತ್ಸೆಗಾಗಿ ತಾಯಿಯೊಬ್ಬಳು ತಾನು ಜನ್ಮ ನೀಡಿದ ಹಸುಳೆಯನ್ನೇ 40 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಹೃದಯ ವಿದ್ರಾವಕ ಪ್ರಸಂಗ ಇಲ್ಲಿಂದ 500 ಕಿಲೋಮೀಟರ್ ದೂರದಲ್ಲಿರುವ ಸತ್ಯಫಾರ್ಮ್ನಲ್ಲಿ ನಡೆದಿದೆ.
ಸಂಧ್ಯಾ ದೇವಿ ಎಂಬುವವರ ಎರಡು ವರ್ಷದ ಮಗ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಆತನನ್ನು ಉದಯಪುರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ 40 ಸಾವಿರ ರೂಪಾಯಿ ಅವಶ್ಯ ಎಂದು ವೈದ್ಯರು ತಿಳಿಸಿದ್ದರು.
ಈ ವೇಳೆ ಸಂಧ್ಯಾ ದೇವಿ ಗರ್ಭಿಣಿಯಾಗಿದ್ದು, ನೆರೆಮನೆಯ ವಿನೋದ್ ಅಗರ್ವಾಲ್ ಎಂಬುವವನು ಚಿಕಿತ್ಸೆಗೆ ಹಣವನ್ನು ಭರಿಸುವುದಾಗಿ ಮತ್ತು ಅದಕ್ಕೆ ಪ್ರತಿಫಲವಾಗಿ ಸಂಧ್ಯಾ ದೇವಿಗೆ ಜನಿಸುವ ಮಗುವನ್ನು ತನಗೆ ನೀಡುವಂತೆ ಒತ್ತಾಯಿಸಿದ್ದ. ಇವರಿಬ್ಬರ ನಡುವೆ 40 ಸಾವಿರ ರೂಪಾಯಿಗೆ `ಮಕ್ಕಳ ಮಾರಾಟ~ ಒಪ್ಪಂದವಾಗಿತ್ತು.
ಒಪ್ಪಂದದಂತೆ 20 ಸಾವಿರ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದಿದ್ದರು. ಇತ್ತೀಚೆಗೆ ಸಂಧ್ಯಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಒಪ್ಪಂದದಂತೆ ಉಳಿಕೆ ಹಣ ನೀಡಿ ಅಗರ್ವಾಲ್ ಮಗುಪಡೆದಿ ದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾನವ ಸಾಗಣೆ ವಿರೋಧಿ ತಂಡದ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಈ ಮಗು ಮಾರಾಟದ ಅಕ್ರಮ ವ್ಯವಹಾರದ ಬಗ್ಗೆ ತನಿಖೆ ನಡೆಸಿದ್ದರು. ಸಂಧ್ಯಾದೇವಿ ಮತ್ತು ಆಕೆಯ ಪತಿ, ನೆರೆಮನೆಯ ವಿನೋದ್ ಮತ್ತು ಈತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.