ಬೆಂಗಳೂರು: ವ್ಯಕ್ತಿಯೊಬ್ಬ ತಂದೆಯ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ವೈಯಾಲಿಕಾವಲ್ ದೇವಸ್ಥಾನ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವೈಯಾಲಿಕಾವಲ್ ನಿವಾಸಿ ಷಣ್ಮುಗಂ ಕೊಲೆಯಾದವರು. ಅವರ ಮಗ ಆರೋಪಿ ಪ್ರಕಾಶ್ (45) ಘಟನೆ ನಂತರ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಟಿಸಿಯಲ್ಲಿ ಮೆಕ್ಯಾನಿಕ್ ಆಗಿದ್ದ ಷಣ್ಮುಗಂ ಅವರು ಕೆಲ ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದ ಅವರು ಒಬ್ಬಂಟಿಯಾಗಿ ವಾಸವಾಗಿದ್ದರು. ಪ್ರಕಾಶ್, ಪತ್ನಿ ಮತ್ತು ಮಕ್ಕಳೊಂದಿಗೆ ಕೋದಂಡರಾಮಪುರದಲ್ಲಿ ನೆಲೆಸಿದ್ದ.
ಷಣ್ಮುಗಂ ಅವರು ವಾಸವಾಗಿದ್ದ ಮನೆಯಲ್ಲಿ ಪಾಲು ಕೊಡಬೇಕೆಂದು ಆತ ಜಗಳವಾಡುತ್ತಿದ್ದ. ಅಂತೆಯೇ ಆತ ರಾತ್ರಿ ಪಾನಮತ್ತನಾಗಿ ಬಂದು ಅವರ ಜತೆ ಜಗಳವಾಡಿ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ವೈಯಾಲಿಕಾವಲ್ ಠಾಣೆಯಲ್ಲಿ ದೂರು ದಾಖಲಾಗಿದೆ.