ಬೆಂಗಳೂರು: ಮಹಿಳೆಯೊಬ್ಬರು ಮಗಳಿಗೆ ವಿಷ ಕುಡಿಸಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಸಮೀಪದ ಭದ್ರಪ್ಪ ಲೇಔಟ್ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ರಂಗಸ್ವಾಮಿ ಎಂಬುವರ ಪತ್ನಿ ಹೇಮಾವತಿ (33) ಅವರು ಮೂರೂವರೆ ವರ್ಷದ ಮಗಳು ಯುಕ್ತಾಳಿಗೆ ಮೊದಲು ವಿಷ ಕುಡಿಸಿ ಕೊಲೆ ಮಾಡಿ ನಂತರ ಅವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ವಿವಾಹವಾಗಿ ಏಳು ವರ್ಷವಾಗಿತ್ತು. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ರಂಗಸ್ವಾಮಿ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಅವರು ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
`ನನ್ನ ಸಾವಿಗೆ ಯಾರು ಕಾರಣರಲ್ಲ~ ಎಂದು ಹೇಮಾವತಿ ಪತ್ರ ಬರೆದಿಟ್ಟಿದ್ದಾರೆ. `ಅಳಿಯ ಮತ್ತು ಮಗಳು ಅನ್ಯೋನ್ಯವಾಗಿದ್ದರು. ಮಗಳು ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಗೊತ್ತಿಲ್ಲ~ ಎಂದು ಹೇಮಾವತಿ ತಾಯಿ ಲಕ್ಷ್ಮಿ ದೂರು ಕೊಟ್ಟಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೊಡಿಗೇಹಳ್ಳಿ ಠಾಣೆಯಲ್ಲಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ಎಂದು ದಾಖಲಾಗಿದೆ.
1ಕೆ.ಜಿ. ಗಾಂಜಾ ವಶ
ಪಟ್ಟಣದ ವಿನಾಯಕ ನಗರದ ವಾಸಿ ನಾಗರಾಜ್ ಅವರ ಮಗ ಮಂಜುನಾಥ (28) ಎಂಬಾತನನ್ನು ಪೊಲೀಸರು ಬಂಧಿಸಿ ಆತನಿಂದ ಒಂದು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಆರೋಪಿ ಭಾನುವಾರ ಬೆಳಗಿನ ಜಾವ ಇಲ್ಲಿನ ಸೂಲಿಬೆಲೆ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಡೆದು ಬರುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದರು.
ಆರೋಪಿ ಗಾಂಜಾವನ್ನು ಸಣ್ಣ ಪೊಟ್ಟಣಗಳಾಗಿ ಕಟ್ಟಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರುತ್ತಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸಿಪಿಐ ಎಂ.ಮಲ್ಲೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಿಎಸ್ಐ ಆಂಜಿನಪ್ಪ, ಮುಖ್ಯ ಪೇದೆ ರಾಜು, ಶಂಕರ್ ಮತ್ತು ಚಂದ್ರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಆತ ಎಲ್ಲಿಂದ ಗಾಂಜಾ ತಂದ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗಿದೆ.
ಗಾಯಾಳು ಸಾವು
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಶ್ರೆನಿವಾಸಪುರ ಮೂಲದ ಅಬ್ದುಲ್ ರವೂಫ್ (40) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟರು. ಹುಬ್ಬಳ್ಳಿಯ ನಗರಾಭಿವೃದ್ಧಿ ಕಚೇರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವರು ಬೆಂಗಳೂರಿಗೆ ಬಂದಿದ್ದರು.
ಶನಿವಾರ ಬೈಕ್ನಲ್ಲಿ ತಮ್ಮ ಪತ್ನಿಯನ್ನು ಕಾಣಲು ಕೋಲಾರಕ್ಕೆ ಹೋಗುತ್ತಿದ್ದರು. ಹೆದ್ದಾರಿಯ ಗೊಟ್ಟಿಪುರ ಗ್ರಾಮದ ಬಳಿ ಯಾವುದೊ ವಾಹನ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡದುದರಿಂದ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿತ್ತು. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.