ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೆ ವಿಷವುಣಿಸಿ ಯುವತಿ, ತಾಯಿ ಆತ್ಮಹತ್ಯೆ

Last Updated 7 ಜುಲೈ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು: ಗರ್ಭಿಣಿಯೊಬ್ಬರು ತನ್ನ ಮೂರು ವರ್ಷದ ಮಗುವಿಗೆ ವಿಷ ಉಣಿಸಿ, ನಂತರ ತನ್ನ ತಾಯಿಯೊಂದಿಗೆ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಹೊರವಲಯದ ಬ್ಯಾಡರಹಳ್ಳಿಯಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಬ್ಯಾಡರಹಳ್ಳಿ ಬಳಿಯ ಬಿಳಿಕಲ್ಲು ಗ್ರಾಮದ ಗಂಗಮ್ಮ (23), ಅವರ ಮೂರು ವರ್ಷದ ಗಂಡು ಮಗು ರಂಜನ್ ಮತ್ತು ಗಂಗಮ್ಮ ಅವರ ತಾಯಿ ಕೋಟೆಲಕ್ಕಮ್ಮ (47) ಮೃತಪಟ್ಟವರು. ಅನೈತಿಕ ಸಂಬಂಧ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಗಮ್ಮ ಅವರಿಗೆ ಐದು ವರ್ಷಗಳ ಹಿಂದೆ ಬಿಳಿಕಲ್ಲು ಗ್ರಾಮದ ಹನುಮಂತರಾಜು ಎಂಬುವರೊಂದಿಗೆ ವಿವಾಹವಾಗಿತ್ತು. ರಂಜನ್ ಜನಿಸಿದ ನಂತರ ಹನುಮಂತರಾಜು ಮನೆಯಿಂದ ದೂರವಾಗಿದ್ದರು. ಅವರಿಗೆ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧವಿತ್ತು.

ಪತಿ ದೂರವಾದ ನಂತರ ಗಂಗಮ್ಮ ಪಕ್ಕದ ಮನೆಯ ಈಶ (23) ಎಂಬುವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಆಕೆ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದ ನಂತರ ಅನೈತಿಕ ಸಂಬಂಧ ಬಯಲಾಗಿದೆ. ಆಕೆ ಒಪ್ಪಿದರೆ ಈಶನೊಂದಿಗೆ ಮರು ಮದುವೆ ಮಾಡಿಸುವುದಾಗಿ ಕುಟುಂಬದ ಹಿರಿಯರು ಮತ್ತು ಗ್ರಾಮಸ್ಥರು ಹೇಳಿದ್ದರು. ಆದರೆ ಇದಕ್ಕೆ ಈಶ ಒಪ್ಪದ ಕಾರಣ ಗಂಗಮ್ಮ ಮತ್ತು ಅವರ ತಾಯಿ ಮನೆಯಲ್ಲಿದ್ದ ಇಲಿ ಪಾಷಾಣವನ್ನು ನೀರಿಗೆ ಬೆರೆಸಿ, ಮೊದಲು ಮಗುವಿಗೆ ಉಣಿಸಿ, ನಂತರ ತಾವೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳ್ದ್ದಿದಾರೆ.

`ಈಶನೊಂದಿಗೆ ಮದುವೆಯ ವಿಚಾರವನ್ನು ಗ್ರಾಮಸ್ಥರು ಗುರುವಾರ ಆಕೆಯ ಮುಂದೆ ಪ್ರಸ್ತಾಪಿಸಿದ್ದರು. ಈಶನನ್ನು ಕೇಳಿ ಸೋಮವಾರ ತನ್ನ ಅಭಿಪ್ರಾಯ ತಿಳಿಸುವುದಾಗಿ ಗಂಗಮ್ಮ ಹೇಳಿದ್ದರು. ಆದರೆ, ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಮನೆಯ ಬಾಗಿಲು ತೆಗೆಯದ್ದನ್ನು ಕಂಡು ಅನುಮಾನಗೊಂಡ ಕೋಟೆಲಕ್ಕಮ್ಮ ಅವರ ತಮ್ಮ ಈರಣ್ಣ ಅಕ್ಕಪಕ್ಕದವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಮೂವರೂ ಸಾವನ್ನಪ್ಪಿರುವುದು ತಿಳಿಯಿತು~ ಎಂದು ಗ್ರಾಮದ ಪುಟ್ಟರಾಜು `ಪ್ರಜಾವಾಣಿ~ಗೆ ತಿಳಿಸಿದರು.

`ಇಬ್ಬರೂ ಒಪ್ಪಿದರೆ ಮದುವೆ ಮಾಡಿಸಲು ಕುಟುಂಬದವರು ಸಿದ್ಧರಿದ್ದೆವು. ಆದರೆ, ಆಕೆಯ ದುಡುಕಿನಿಂದ ಮೂರು ಜೀವಗಳು ಬಲಿಯಾಗಿವೆ.  ಈಶ ಗ್ರಾಮದಿಂದ ಕಣ್ಮರೆಯಾಗಿದ್ದು, ಆತ ಮದುವೆಗೆ ನಿರಾಕರಿಸಿರುವುದೇ ಘಟನೆಗೆ ಕಾರಣ. ಆತನಿಗೆ ತಕ್ಕ ಶಿಕ್ಷೆಯಾಗಬೇಕು~ ಎಂದು ಗಂಗಮ್ಮ ಅವರ ಹತ್ತಿರದ ಸಂಬಂಧಿ ಹನುಮಂತ ಒತ್ತಾಯಿಸಿದರು.

`ಈಶನ ತಪ್ಪಿಲ್ಲ~ : `ನನ್ನ ಸಾವಿಗೆ ನಾನೇ ಕಾರಣ. ಇದರಲ್ಲಿ ಈಶನ ತಪ್ಪಿಲ್ಲ~ ಎಂದು ಗಂಗಮ್ಮ ಪತ್ರ ಬರೆದಿಟ್ಟಿದ್ದಾರೆ.

`ನನ್ನ ಸಾವಿನಿಂದ ನಿನಗೆ ತೊಂದರೆಯಾಗುವುದಿಲ್ಲ. ನಿನ್ನ  ಬಾಳು ಸುಖವಾಗಿರಲಿ~ ಎಂದು ಆಕೆ ಈಶನಿಗೆ ಬರೆದಿರುವ ಮತ್ತೊಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಶನಿವಾರ ಮರಣೋತ್ತರ ಪರೀಕ್ಷೆ ನಡೆಯಿತು.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಾಮೂಹಿಕ ಆತ್ಮಹತ್ಯೆ : ನಗರದ ಈ ಹಿಂದಿನ ಪ್ರಕರಣಗಳು

* ಜನವರಿ 19, 2011 : ತನ್ನ ಸೋದರಿಯ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ನಂತರ ನೇಣು ತಾನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಹೊಂಗಸಂದ್ರದಲ್ಲಿ ನಡೆದಿತ್ತು.

* ಮಾರ್ಚ್ 17, 2011 : ಮಗಳು ಯುವಕನೊಬ್ಬನನ್ನು ಪ್ರೀತಿಸಿ, ಮದುವೆಯಾಗಿದ್ದ ವಿಷಯ ತಿಳಿದ ಒಂದೇ ಕುಟುಂಬದ ಮೂವರು ಹೆಣ್ಣೂರಿನ ಸಾರಾಯಿಪಾಳ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

* ಮೇ  17, 2011 : ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿದ್ದ ಘಟನೆ ಚಂದ್ರಾಲೇಔಟ್‌ನ ಅರುಂಧತಿ ನಗರದಲ್ಲಿ ನಡೆದಿತ್ತು.

* ಅಕ್ಟೋಬರ್ 8, 2011 : ಹಣಕಾಸಿನ ತೊಂದರೆಯಿಂದ ಎಲ್‌ಐಸಿ ಉದ್ಯೋಗಿಯೊಬ್ಬರು ತನ್ನ ಪತ್ನಿ ಮತ್ತು ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕೋಣನಕುಂಟೆ ಕ್ರಾಸ್ ಬಳಿಯ ಸೌಧಾಮಿನಿ ಲೇಔಟ್‌ನಲ್ಲಿ ನಡೆದಿತ್ತು.

* ಅಕ್ಟೋಬರ್ 16, 2011 : ಅತಿಯಾದ ಸಾಲದ ಕಾರಣದಿಂದ ಒಂದೇ ಕುಟುಂಬದ ಏಳು ಜನರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ರಾಮಮೂರ್ತಿನಗರದಲ್ಲಿ ನಡೆದಿತ್ತು.

* ಡಿಸೆಂಬರ್ 2, 2011 : ವೈದ್ಯ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ವಾಲ್ಮೀಕಿನಗರದಲ್ಲಿ ನಡೆದಿತ್ತು.

`ಓದಿಸುವ ಆಸೆಯಿತ್ತು~

`ಮಗು ರಂಜನ್‌ನನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿತ್ತು. ಆದರೆ, ದುರಾದೃಷ್ಟವೆಂಬಂತೆ ಈ ಘಟನೆ ನಡೆದುಹೋಗಿದೆ~ ಎಂದು ಗಂಗಮ್ಮ ಅವರ ಹತ್ತಿರದ ಸಂಬಂಧಿ ಹನುಮಂತ ಹೇಳಿದರು.

`ರಂಜನ್ ಚುರುಕು ಬುದ್ಧಿಯವನಾಗಿದ್ದ. ಅವನನ್ನು ನೋಡಿದರೆ, ಮನೆಯಿಂದ ದೂರಾದ ಅವನ ತಂದೆ ಹನುಮಂತರಾಜುವನ್ನೇ ನೋಡಿದಂತಾಗುತ್ತಿತ್ತು. ಹನುಮಂತರಾಜುವಿನ ಕರುಳ ಕುಡಿಯನ್ನು ಚೆನ್ನಾಗಿ ಓದಿಸಿ, ದೊಡ್ಡ ಮನುಷ್ಯನನ್ನಾಗಿಸಬೇಕೆಂಬ ಆಸೆ ಈಗ ಮಣ್ಣುಪಾಲಾಗಿದೆ~ ಎಂದರು.

`ಹನುಮಂತರಾಜು ಅವರ ಪೋಷಕರು ಮಗ ಮನೆಯಿಂದ ದೂರವಾದ ನಂತರ ಗಂಗಮ್ಮ ಮತ್ತು ಅವರ ತಾಯಿ ಕೋಟೆಲಕ್ಕಮ್ಮ ಅವರ ಜೀವನ ನಿರ್ವಹಣೆಗೆ ಆಸರೆಯಾಗಿದ್ದರು. ಬಾಡಿಗೆ ಬರುವ ಮನೆಯೊಂದನ್ನು ಗಂಗಮ್ಮ ಅವರಿಗೇ ಬಿಟ್ಟುಕೊಟ್ಟಿದ್ದರು~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT