ನವಲಗುಂದ: ಪ್ರತಿವರ್ಷ ಗವಿಮಠದಲ್ಲಿ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಭಕ್ತರ ಸಹಕಾರದಿಂದ ಯಶಸ್ವಿಯಾಗುತ್ತಿದೆ ಎಂದು ಗವಿಮಠದ ಬಸವಲಿಂಗ ಸ್ವಾಮೀಜಿ ನುಡಿದರು.
ಅವರು ಮಠದಲ್ಲಿ ನಡೆದ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮುದಾಯ ಭವನ ನಿರ್ಮಾಣಕ್ಕೆ ರೂ.10 ಲಕ್ಷ ನೀಡಿದ್ದಾರೆ. ಮಠಗಳು ಎಷ್ಟು ಆಸ್ತಿ ಹೊಂದಿವೆ ಎಂಬುದು ಮುಖ್ಯವಲ್ಲ. ಅವುಗಳ ಮಾಡುವ ಸಮಾಜ ಸುಧಾರಣಾ ಕಾರ್ಯ ಮುಖ್ಯ. ಸಂಸ್ಕೃತಿ ರಕ್ಷಣೆಗೆ ಕೈಲಾದಷ್ಟು ಸೇವೆ ಮಾಡಬೇಕು ಎಂದು ಅವರು ಹೇಳಿದರು.
ಸಮಾಜ ಸುಧಾರಣೆ ಕೇವಲ ಮಠಾಧೀಶರಿಂದ ಮಾತ್ರ ಸಾಧ್ಯವಿಲ್ಲ. ಭಕ್ತರು ಇದಕ್ಕೆ ಕಂಕಣಬದ್ಧರಾಗಬೇಕು ಎಂದು ಶ್ರೀಗಳು ನೀಡಿದರು.
ತಹಸೀಲ್ದಾರ ವಿನಾಯಕ ಪಾಲನಕರ, ಸಿಪಿಐ ಮೋಹನಪ್ರಸಾದ ದುಬೆ, ಮುಖ್ಯಾಧಿಕಾರಿ ಎಸ್.ಬಿ.ಬ್ಯಾಳಿ, ಪಿಎಸ್ಐ ವೆಂಕಟಸ್ವಾಮಿ, ಪುರಸಭಾ ಅಧ್ಯಕ್ಷ ದೇವೇಂದ್ರಪ್ಪ ಹಳ್ಳದ, ಉಪಾಧ್ಯಕ್ಷೆ ಶಶಿಕಲಾ ಚಿಕ್ಕಣ್ಣವರ ಮುಂತಾದವರನ್ನು ಸನ್ಮಾನಿಸಲಾಯಿತು.
ಅಣ್ಣಪ್ಪ ಬಾಗಿ, ನಿಂಗಪ್ಪ ಚವಡಿ, ರಾಯನಗೌಡ ಪಾಟೀಲ, ಸಕ್ರಪ್ಪ ಹಳ್ಳದ, ವಿ.ಎನ್.ಡೋಣೂರಮಠ, ಸಿದ್ದಲಿಂಗಯ್ಯ ಹಿರೇಮಠ, ಟಿ.ವಿ.ಮಹಾಂತೇಶ, ಅಶೋಕ ಮಜ್ಜಿಗುಡ್ಡ, ಎಸ್.ಎಂ.ಪಟ್ಟಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.