ಮಡಿಕೇರಿ: ದಸರಾ ಜನೋತ್ಸವದ ಅಂಗವಾಗಿ ಸಾಂಸ್ಕೃತಿಕ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಇಂದು ಮಕ್ಕಳ ದಸರಾ ಜರುಗಲಿದೆ. ಅ.20 ರಂದು ಬೆಳಿಗ್ಗೆಯಿಂದ ರಾತ್ರಿಯವರೆಗೂ ಮಕ್ಕಳಿಗೆ ಮೀಸಲಾದ ವೈವಿಧ್ಯಮಯ ಕಾರ್ಯಕ್ರಮಗಳು ಮಡಿಕೇರಿಯ ವಿವಿಧೆಡೆ ನಡೆಯಲಿವೆ.
ಬೆಳಿಗ್ಗೆ 10 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಶಿವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ, ನಗರ ದಸರಾ ಸಮಿತಿ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಕಾರ್ಯಾ ಧ್ಯಕ್ಷ ರಾಬಿನ್ ದೇವಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ ಗಾಂಧಿ ಮೈದಾನದಲ್ಲಿ 5 ರಿಂದ 7 ಮತ್ತು 8 ರಿಂದ 10 ನೇ ತರಗತಿ ವಿಭಾಗದಲ್ಲಿ ಮಕ್ಕಳ ಸಂತೆ ಸ್ಪರ್ಧೆ ನಡೆಯಲಿದೆ. ನಂತರ ಬೆಳಿಗ್ಗೆ 10 ಗಂಟೆಯಿಂದ ಮಕ್ಕಳ ದಸರಾ ಮಂಟಪ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳು ತಾವೇ ರಚಿಸಿದ ವೈವಿಧ್ಯಮಯ ಮಂಟಪ ಗಳನ್ನು ಈ ಸ್ಪರ್ಧೆಯಲ್ಲಿ ಪ್ರದರ್ಶಿಸಬಹುದಾಗಿದೆ.
ಈ ಅಂಗವಾಗಿ 5 ನೇ ತರಗತಿಯಿಂದ 7 ನೇ ತರಗತಿಯವರೆಗೆ ಮತ್ತು 8 ರಿಂದ 10 ನೇ ತರಗತಿಯವರೆಗಿನ ಮಕ್ಕಳಿಗೆ `ನಾ ಕಂಡ ಮಡಿಕೇರಿ ದಸರಾ~ ಎಂಬ ವಿಷಯದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ನಗರದ ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಚೇತನ ಚಿಲುಮೆ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಜರುಗಲಿದೆ.
ಮಡಿಕೇರಿಯ ದಸರಾ ಅಂಗವಾಗಿ ನಗರದ ಮೈಸೂರು ರಸ್ತೆಯಲ್ಲಿರುವ ರೋಟರಿ ಹಾಲ್ನಲ್ಲಿ 5 ರಿಂದ 7 ನೇ ತರಗತಿ ಮತ್ತು 8 ರಿಂದ 10 ನೇ ತರಗತಿ ವಿಭಾಗಗಳಲ್ಲಿ ಪುಷ್ಪ ರಂಗೋಲಿ ಮತ್ತು ಬಣ್ಣದ ರಂಗೋಲಿಗಳ ಪ್ರತ್ಯೇಕ ವಿಭಾಗಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸ್ಪರ್ಧೆ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಓಂಕಾರೇಶ್ವರ ದೇವಾಲಯದ ಬಳಿಯಿರುವ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ 1 ರಿಂದ 4 ನೇ ತರಗತಿ ಮಕ್ಕಳ ವಿವಿಧ ವಯೋಮಾನ ವಿಭಾಗದಲ್ಲಿ ಛದ್ಮವೇಷ ಸ್ಪರ್ಧೆಗಳು ಜರುಗಲಿದೆ.
ಈ ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ಪ್ರಾಯೋಜಕರ ನೆರವಿನಿಂದ ಆಕರ್ಷಕ ಬಹುಮಾನ ನೀಡಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.