ಮಡಿಕೇರಿ: ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಂಗಳವಾರದಿಂದ (ಅ.16) ಆರಂಭವಾಗಲಿದ್ದು, ಸಂಜೆ 6 ಗಂಟೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ.
* ಜಿಲ್ಲೆಯ ಹಿರಿಯ ಸಿಳ್ಳೆವಾದಕ, ಶನಿವಾರಸಂತೆಯ ಬೆಸೂರು ಬಳಿಯ ಅಂಧ ಕಲಾವಿದ ರುದ್ರಪ್ಪ ಅವರಿಂದ ಸಿಳ್ಳೆಯಲ್ಲಿ ಭಕ್ತಿ ಗೀತೆಗಳು ಮೂಡಿಬರಲಿದೆ. ರಾಜ್ಯವ್ಯಾಪಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ರುದ್ರಪ್ಪ, ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡಿದ್ದರೂ ಕಲೆಯ ಮೇಲಿನ ಆಸಕ್ತಿಯಿಂದ ಸಿಳ್ಳೆ ಮೂಲಕವೇ ವಿವಿಧ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಅಂಧತ್ವನ್ನು ಮೆಟ್ಟಿನಿಂತು ಜೀವನದಲ್ಲಿ 6 ದಶಕಗಳನ್ನು ತಮ್ಮ ಕಾಲಮೇಲೆ ತಾವೇ ಸ್ವಾವಲಂಬಿಯಾಗಿ ಬದುಕಿರುವ ಈ ಅಂಧ ಕಲಾವಿದರನ್ನು ದಸರಾ ಸಾಂಸ್ಕೃತಿಕ ಸಮಿತಿ ಸನ್ಮಾನಿಸಿ ಗೌರವಿಸಲಿದೆ.
* ಮಡಿಕೇರಿಯ ಸ್ಪೂರ್ತಿ ಮಹಿಳಾ ಮಂಡಳಿ ವತಿಯಿಂದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭವಾಗಿ ಭಕ್ತಿಸಂಗೀತ ಕಾರ್ಯಕ್ರಮ ಜರುಗಲಿದೆ. ಕುಶಾಲನಗರ ಕಾವೇರಿ ಕಲಾಪರಿಷತ್ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ಜರುಗಲಿದೆ. ವೀರಾಜಪೇಟೆ ತಾಲೂಕಿನ ಚಿಕ್ಕರೇಷ್ಮೆಯ ಪಂಜರಿ ಎರವರ ಕಲಾ ತಂಡದಿಂದ ಆದಿವಾಸಿಗಳ ವೈವಿಧ್ಯಮಯ ನೃತ್ಯ ವೈಭವ ಪ್ರದರ್ಶಿಸಲ್ಪಡುತ್ತದೆ. ರಾಜ್ಯದ ವಿವಿಧೆಡೆ ಈಗಾಗಲೇ ಕಾರ್ಯಕ್ರಮ ನೀಡಿರುವ ಪಂಜರಿ ಯರವರ ಕಲಾ ತಂಡದವರು ಕಾಡಿನ ಮಕ್ಕಳು ನೃತ್ಯ ಸಂಗೀತಗಳನ್ನು ಪ್ರದರ್ಶಿಸಲಿದ್ದಾರೆ.
* ಸುಂಟಿಕೊಪ್ಪ ಬಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಸ್ಥ ವಿಶೇಷ ಶಾಲೆಯ ಮಕ್ಕಳು ನೃತ್ಯರೂಪಕದ ಜತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಿದ್ದಾರೆ. ಸಾಮಾನ್ಯ ಮಕ್ಕಳಂತಲ್ಲದ ಸ್ವಸ್ಥ ಶಾಲೆಯ ವಿಶೇಷ ಮಕ್ಕಳು ಪ್ರತಿಭೆಯಲ್ಲಿ ಮಾತ್ರ ಬೇರೆಲ್ಲಾ ಮಕ್ಕಳಿಗಿಂತ ತಾವೇನೂ ಕಮ್ಮಿ ಇಲ್ಲ ಎಂಬುದನ್ನು ಸಾಂಸ್ಕೃತಿಕ ವೈವಿಧ್ಯದ ಮೂಲಕ ನಿರೂಪಿಸಲಿದ್ದಾರೆ. ಈ ಕಾರ್ಯಕ್ರಮಗಳೊಂದಿಗೆ ಮಡಿಕೇರಿಯ ವಂಶಿ ಮತ್ತು ಬಳಗ, ಹೆಚ್.ಜಿ. ಆಕಾಶ್ ಅವರಿಂದ ನೃತ್ಯ ಪ್ರದರ್ಶನವೂ ಆರಂಭಿಕ ದಿನ ನಡೆಯಲಿದೆ.