ಮಡಿಕೇರಿ: ಅಲ್ಲಿ ಲವಲವಿಕೆ ಇತ್ತು. ಸಾಮಾನ್ಯರಂತೆ ತಾವು ಕೂಡ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಇತರರಂತೆ ಬದುಕುತ್ತೇವೆ ಎಂಬ ಸಂದೇಶ ಹೊಮ್ಮುತ್ತಿತ್ತು. ತಮ್ಮ ಮಕ್ಕಳು ಇತರರಂತೆ ಬದುಕು ಕಟ್ಟಿಕೊಳ್ಳಬಲ್ಲರು ಎಂಬ ವಿಶ್ವಾಸ ಪೋಷಕರಿಗೆ ಬಲವಾಗಿ ಮೂಡಿಸಿದ ಕ್ಷಣವದು...
ನಗರದ ಗಾಂಧಿ ಮೈದಾನದಲ್ಲಿ ಮಂಗಳವಾರ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಅಂಗವಿಕಲರಿಗೆ ಏರ್ಪಡಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಾವಳಿ.
ಇದಕ್ಕೂ ಮೊದಲು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧಾಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಶೆಣೈ ಹಾಗೂ ಅಂಗವಿಕಲ ಮಕ್ಕಳು ಚಾಲನೆ ನೀಡಿದರು. ಜಿಲ್ಲಾ ಅಂಗವಿಕಲ ಅಧಿಕಾರಿ ನೀರಬಿದಿರೆ ನಾರಾಯಣ ಮಾತನಾಡಿದರು.
ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಂ.ಮಾದಪ್ಪ ವಿವಿಧ ವಯೋಮಾನದವರಿಗೆ 50 ಮತ್ತು 100 ಮೀಟರ್ ಓಟ, ಮಡಿಕೆ ಒಡೆಯುವುದು, ಕಾಳು ಹೆಕ್ಕುವುದು, ಭಾರದ ಗುಂಡು ಎಸೆತ, ಹಾಡುಗಾರಿಕೆ ಮತ್ತಿತರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧಾ ಚಟುವಟಿಕೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮುಳಿಯ ಕೇಶವ ಭಟ್ ಸನ್ಸ್ ವ್ಯವಸ್ಥಾಪಕ ಪೊನ್ನಣ್ಣ, ಕೊಡಗು ವಿದ್ಯಾಲಯದ ಅಪರ್ಚುನಿಟೀಸ್ ಶಾಲೆಯ ಪ್ರಾಂಶುಪಾಲರಾದ ಗೀತಾ ಇತರರು ಪಾಲ್ಗೊಂಡಿದ್ದರು.