ಮಡಿಕೇರಿ: ಶೀಘ್ರದಲ್ಲಿಯೇ ಮಡಿಕೇರಿಯಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗಲಿದೆ. ಇದಕ್ಕಾಗಿ ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಕೊಳಚೆ ಮಂಡಳಿಯು ಸುಮಾರು 60.20 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಹೇಳಿದರು.
ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಇಲ್ಲಿನ ಗಾಲ್ಫ್ ಮೈದಾನ ಬಳಿಯ ಸ್ಥಳವನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ಜನಸಂಖ್ಯೆಯು ಸಹ ಹೆಚ್ಚುತ್ತಿದೆ. ಜನರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 106 ಕಿ.ಮೀ. ಉದ್ದದ ಒಳಚರಂಡಿ ನಿರ್ಮಿಸುವುದು ಹಾಗೂ ಅಲ್ಲಿಂದ ಬರುವ ಕೊಳಚೆ ನೀರನ್ನು ಶುದ್ಧೀಕರಣ ಮಾಡಲು ಘಟಕ ಸ್ಥಾಪಿಸಬೇಕಾಗಿದೆ ಎಂದರು. ಒಟ್ಟಾರೆ ಈ ಯೋಜನೆಗಾಗಿ 62.20 ಕೋಟಿ ರೂಪಾಯಿಯ ಅಂದಾಜು ಪಟ್ಟಿಯನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಯಾರಿಸಲಾಗಿದೆ ಎಂದು ತಿಳಿಸಿದರು.
ನಗರದ ಹೊರವಲಯದ ಗಾಲ್ಫ್ ಮೈದಾನ ಬಳಿ ಖಾಸಗಿಯವರ 4 ಎಕರೆ ಜಾಗ ಇದ್ದು, ಈ ಸ್ಥಳದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ವಿಧಾನ ಸಭಾಧ್ಯಕ್ಷರಾದ ಕೆ.ಜಿ. ಬೋಪಯ್ಯ, ಶಾಸಕರಾದ ಅಪ್ಪಚ್ಚುರಂಜನ್ ಪ್ರಯತ್ನದಿಂದಾಗಿ ನಗರಕ್ಕೆ ಒಳಚರಂಡಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು.
ನಗರಸಭೆಯ ಆಯುಕ್ತ ಶಶಿಕುಮಾರ್ ಮಾತನಾಡಿ, ಗಾಲ್ಫ್ ಮೈದಾನದ ಬಳಿ ಈ ಜಮೀನು ಖಾಸಗಿಯವರಿಗೆ ಸೇರಿದೆ. ಇಲ್ಲಿ ೂಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.