ಮಡಿಕೇರಿ: ನಗರದಲ್ಲಿ ಜನವರಿ ಏಳರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಸಿದ್ಧತೆ ನಡೆಯುತ್ತಿದ್ದು, ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಹಾಗೂ ಸಾರ್ವಜನಿಕರಿಗೆ ವಸತಿ ವ್ಯವಸ್ಥೆ ದೊರೆಯುವುದು ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.
ಬೆಟ್ಟ ಗುಡ್ಡ, ಗಿರಿ ಕಂದರಗಳ ಮಧ್ಯೆದಲ್ಲಿ ಅರಳಿ ನಿಂತಿರುವ ಈ ಪುಟ್ಟ ನಗರದಲ್ಲಿ ಹಿಂದೆಂದೂ ಕೇಳರಿಯದಷ್ಟು ಜನರು ಬರುವ ನಿರೀಕ್ಷೆಯಿದೆ. ಸುಮಾರು 8,500 ಪರಿಷತ್ತಿನ ಪ್ರತಿನಿಧಿಗಳು, 1,000 ಅತಿಥಿ ಗಣ್ಯರು, 1,000 ಜನ ಕಾರ್ಯಕ್ರಮ ನೀಡುವವರು ಬರಲಿದ್ದಾರೆ. ಇದರ ಹೊರತಾಗಿ ಸಮ್ಮೇಳನ ವೀಕ್ಷಿಸಲು ಪ್ರತಿದಿನ 30,000 ಜನರು ಬರುವ ನಿರೀಕ್ಷೆಯಿದೆ. ಮೂರು ದಿನಗಳ ಲೆಕ್ಕ ಹಾಕಿದರೆ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಬರಬಹುದು.
ಇವರಿಗೆಲ್ಲ ಸೂಕ್ತ ವಸತಿ ಕಲ್ಪಿಸುವುದು ಸವಾಲಿನ ಕೆಲಸವಾಗಿದೆ. ಪರಿಷತ್ತಿನಲ್ಲಿ ನೋಂದಾಯಿಸಿಕೊಂಡ ಸಮ್ಮೇಳನದ ಪ್ರತಿನಿಧಿಗಳಿಗೆ ಹಾಗೂ ಗಣ್ಯರಿಗೆ ವಸತಿ ಕಲ್ಪಿಸುವ ವ್ಯವಸ್ಥೆಯನ್ನು ಸಂಘಟಕರು ವಹಿಸಿಕೊಂಡಿದ್ದಾರೆ. ಮಡಿಕೇರಿಯಲ್ಲಿ ಸುಮಾರು 32ರಿಂದ 35 ಲಾಡ್ಜ್ಗಳಿದ್ದು, ಇವುಗಳಲ್ಲಿ ಇರುವ ಅರ್ಧದಷ್ಟು ರೂಮುಗಳನ್ನು ಪರಿಷತ್ತಿಗೆ ಬಿಟ್ಟುಕೊಡಲಾಗಿದೆ. ಬಾಕಿ ಇರುವ ರೂಮುಗಳನ್ನು ಸಾರ್ವಜನಿಕರಿಗೆ ನೀಡಲು ಹೋಟೆಲ್ ಮಾಲೀಕರ ಸಂಘವು ನಿರ್ಧರಿಸಿದೆ.
ಮಡಿಕೇರಿ ಹಾಗೂ ಸುತ್ತಮುತ್ತ ಸುಮಾರು 500ರಿಂದ 600 ಹೋಂ ಸ್ಟೇಗಳಿವೆ. ಇವುಗಳಲ್ಲಿಯೂ ಪರಿಷತ್ ಕೋಣೆಗಳನ್ನು ಕಾಯ್ದಿರಿಸುವ ವ್ಯವಸ್ಥೆ ಮಾಡಿಕೊಂಡಿದೆ. ಬಾಕಿ ಉಳಿಯುವ ಕೋಣೆಗಳನ್ನು ಹೋಂ ಸ್ಟೇ ಮಾಲೀಕರು ನೇರವಾಗಿ ಸಾರ್ವಜನಿಕರಿಗೆ ನೀಡಬಹುದಾಗಿದೆ.
ಮಡಿಕೇರಿಯಲ್ಲಿ ವಸತಿಗೆ ಸ್ಥಳಾವಕಾಶದ ಕೊರತೆ ಎದುರಾದರೆ ನಗರದಿಂದ 25 ಕಿ.ಮೀ. ದೂರವಿರುವ ಕುಶಾಲನಗರದಲ್ಲಿಯೂ ಲಾಡ್ಜ್ಗಳನ್ನು ಕಾಯ್ದಿರಿಸಲಾಗಿದೆ. ಇಲ್ಲಿ ಸುಮಾರು 29 ಲಾಡ್ಜ್ಗಳಿವೆ. ಇವುಗಳಲ್ಲಿ ಕೂಡ ಪರಿಷತ್ತು ಕೆಲವು ಕೋಣೆಗಳನ್ನು ಕಾಯ್ದಿರಿಸಿದೆ.
‘ಪ್ರತಿ ಲಾಡ್ಜ್ಗಳಿಂದ ಎರಡು ರೂಮುಗಳನ್ನು ಪರಿಷತ್ಗೆ ಉಚಿತವಾಗಿ ನೀಡಲಾಗುತ್ತದೆ. ಬಾಕಿ ಉಳಿಯುವ ಅರ್ಧದಷ್ಟು ರೂಮುಗಳನ್ನು ಶೇ 30ರಷ್ಟು ರಿಯಾಯಿತಿ ದರದಲ್ಲಿ ಪರಿಷತ್ಗೆ ನೀಡಲಾಗಿದೆ. ಇನ್ನುಳಿಯುವ ಅರ್ಧದಷ್ಟು ರೂಮುಗಳನ್ನು ಲಾಡ್ಜ್ ಮಾಲೀಕರು ತಮ್ಮ ಇಚ್ಛೆಯಂತೆ ಸಾರ್ವಜನಿಕರಿಗೆ ನೀಡಬಹುದಾಗಿದೆ’ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ತಿಳಿಸಿದರು.
ಹೊರಜಿಲ್ಲೆಗಳ ಜನರು ಈಗಾಗಲೇ ರೂಮುಗಳ ಬಗ್ಗೆ ವಿಚಾರಿಸುತ್ತಿದ್ದಾರೆ. ಹಲವು ಲಾಡ್ಜ್ಗಳಲ್ಲಿ ರೂಮುಗಳು ಸಿಗುತ್ತಿಲ್ಲ. ಇನ್ನೂ ಕೆಲ ಹೋಟೆಲ್ಗಳ ವಿಪರೀತ ದರವನ್ನು ಕೇಳಿ ಜನರು ಹಿಂಜರಿಯುತ್ತಿದ್ದಾರೆ.
ದಲೈಲಾಮಾ ಆಗಮನ: ಈ ನಡುವೆ ಬೌದ್ಧ ಧರ್ಮಗುರು ದಲೈಲಾಮಾ ಅವರು ಕುಶಾಲನಗರ ಬಳಿಯಿರುವ ಬೈಲುಕುಪ್ಪೆ ಕ್ಯಾಂಪಿನಲ್ಲಿ ಡಿ. 23 ರಿಂದ ಜ. 4ರವರೆಗೆ ವಾಸ್ತವ್ಯ ಹೂಡಲಿದ್ದಾರೆ. ಇದರಿಂದ ಕುಶಾಲನಗರದಲ್ಲಿನ ಎಲ್ಲ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳನ್ನು ಅವರ ಅನುಯಾಯಿಗಳು ಈಗಾಗಲೇ ಬುಕ್ ಮಾಡಿದ್ದಾರೆ.
ಒಂದು ವೇಳೆ ದಲೈಲಾಮಾ ಅವರು ತಮ್ಮ ವಾಸ್ತವ್ಯವನ್ನು ಇನ್ನಷ್ಟು ದಿನ ಮುಂದುವರಿಸಿದರೆ ಈ ರೂಮುಗಳು ದೊರೆಯುವುದು ಕಷ್ಟ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಆತಂಕ ವ್ಯಕ್ತಪಡಿಸಿದರು.
ಪ್ರತಿನಿಧಿಗಳಿಗೆ ಆದ್ಯತೆ: ‘ಸಮ್ಮೇಳನಕ್ಕೆ ರೂ 300 ಶುಲ್ಕ ಪಾವತಿಸಿ ಪ್ರತಿನಿಧಿಯಾಗಿ ಬರುತ್ತಿರುವವರಿಗೆ ವಸತಿ ಕಲ್ಪಿಸಲು ಆದ್ಯತೆ ನೀಡುತ್ತಿದ್ದೇವೆ. ಅಂದಾಜು 8,500 ಜನರು ಬರಬಹುದು. ಇವರ ಜೊತೆ ಅತಿಥಿಗಳಿಗೆ, ಗಣ್ಯರಿಗೆ ಹಾಗೂ ಕಲಾವಿದ-ರಿಗೆ ಕೂಡ ವಸತಿ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದು ಸಮ್ಮೇಳನದ ವಸತಿ ಸಮಿತಿಯ ಸಂಚಾಲಕ ಮೊಹಿದ್ದೀನ್ ಹೇಳಿದರು.
‘ಸಮ್ಮೇಳನ ನಡೆಯುವ ಮೂರು ದಿನಗಳವರೆಗೂ ಸಾಹಿತ್ಯಾಸಕ್ತರಿಗೆ, ಸಾರ್ವಜನಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ವಸತಿ ವ್ಯವಸ್ಥೆಯನ್ನು ಪರಿಷತ್ತಿನ ಪ್ರತಿನಿಧಿಗಳಿಗೆ, ಗಣ್ಯರಿಗೆ ಹಾಗೂ ಅತಿಥಿಗಳಿಗೆ ಮಾತ್ರ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ವಸತಿ ವ್ಯವಸ್ಥೆಯನ್ನು ಸ್ವತಃ ಮಾಡಿಕೊಳ್ಳುವುದು ಒಳಿತು. ಮಡಿಕೇರಿ ಹೊರವಲಯದಲ್ಲಿ ಹಾಗೂ ಸುತ್ತಮುತ್ತ ಊರುಗಳಲ್ಲಿ ಹೋಂ ಸ್ಟೇಗಳು, ಹೋಟೆಲ್ಗಳಿದ್ದು ಅಲ್ಲಿ ಅವರು ವಾಸ್ತವ್ಯ ಹೂಡಬಹುದು ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.