ಮಡಿಕೇರಿ: ನಗರದಲ್ಲಿ ಜನವರಿ ಏಳರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ‘ಪ್ಲಾಸ್ಟಿಕ್ ಮುಕ್ತ ಸಮ್ಮೇಳನ’ ಎಂದು ಘೋಷಿಸಲಾಗಿದೆ.
ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಪ್ಲಾಸ್ಟಿಕ್ ಚೀಲಗಳನ್ನು, ಪ್ಲಾಸ್ಟಿಕ್ ತಟ್ಟೆ ಹಾಗೂ ಪ್ಲಾಸ್ಟಿಕ್ ಲೋಟಗಳನ್ನು ಬಳಸದಿರಲು ಸಮ್ಮೇಳನ ಸಮಿತಿ ನಿರ್ಧರಿ ಸಿದೆ. ಹಚ್ಚ ಹಸಿರಿನ ಪರಿಸರದಲ್ಲಿರುವ ಮಡಿಕೇರಿ ಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ಪರಿಸರಸ್ನೇಹಿ ಸಮ್ಮೇಳನವನ್ನಾಗಿ ಆಚರಿಸಲಾಗುತ್ತಿದೆ.
ಹತ್ತಿಯಿಂದ (ಕಾಟನ್ ಬಟ್ಟೆ) ತಯಾರಿಸಲಾದ ಕೈಚೀಲ ಗಳು, ಅಡಿಕೆ ಹಾಳೆಯಿಂದ ತಯಾರಿಸಲಾದ ತಟ್ಟೆ ಗಳು ಹಾಗೂ ಪೇಪರ್ನಿಂದ ತಯಾರಿಸಲಾದ ಲೋಟಗಳನ್ನು ಬಳಸಲು ನಿರ್ಧರಿಸಲಾಗಿದೆ.
ಸುಮಾರು 2 ಲಕ್ಷ ಅಡಿಕೆ ಹಾಳೆಯಿಂದ ತಯಾರಿಸ ಲಾದ ತಟ್ಟೆಗಳನ್ನು ಪೂರೈಸುವಂತೆ ವಿಟ್ಲದ ಕಂಪೆನಿ ಯೊಂದಕ್ಕೆ ಟೆಂಡರ್ ನೀಡಲಾಗಿದೆ. ಇದಲ್ಲದೇ, ಪೇಪರ್ ಲೋಟಗಳನ್ನು ಪಡೆಯಲು ಆಹಾರ ಸಮಿತಿಯು ಪ್ರಯತ್ನ ನಡೆಸಿದೆ.
ಖರ್ಚು ಜಾಸ್ತಿ: ‘ಪ್ಲಾಸ್ಟಿಕ್ ವಸ್ತುಗಳಿಗೆ ಹೋಲಿಸಿದರೆ ಅಡಿಕೆ ಹಾಳೆ ತಟ್ಟೆಗಳಿಗೆ ಹಾಗೂ ಪೇಪರ್ ಲೋಟಗಳ ದರ ಜಾಸ್ತಿ. ನಮ್ಮ ಬಜೆಟ್ ಮೇಲೂ ಪರಿಣಾಮ
ಬೀರುವಂತಿ ದ್ದರೂ ಪರಿಸರದ ಕಾಳಜಿಯಿಂದ ಈ ಪ್ರಯತ್ನಕ್ಕೆ ಕೈ ಹಾಕಿ ದ್ದೇವೆ. ಸಾರ್ವಜನಿಕರು ನಮಗೆ ಸಹಕರಿಸಬೇಕು’ ಎಂದು ಆಹಾರ ಸಮಿತಿ ಪ್ರಧಾನ ಸಂಚಾಲಕ ಕೇಶವ್ ಕಾಮತ್ ಹೇಳಿದರು.
ಪ್ಲಾಸ್ಟಿಕ್ ಮುಕ್ತ ನಗರ: ಮಡಿಕೇರಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ನಗರಸಭೆಯು ಘೋಷಿಸಿದೆ. ಪರಿ ಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಚೀಲಗಳನ್ನು ನಗರ ವ್ಯಾಪ್ತಿಯಲ್ಲಿ ಬಳಸದಂತೆ 3 ವರ್ಷಗಳ ಹಿಂದೆಯೇ ತೀರ್ಮಾನ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ಕೈಚೀಲಗಳನ್ನು ಮಾರಾಟ ಮಾಡಿದರೆ ಅಥವಾ ಬಳಸಿದರೆ ₨ 100ರಿಂದ ₨ 500 ದಂಡವನ್ನು ವಿಧಿಸಲು ಕೂಡ ನಗರಸಭೆಯು ತೀರ್ಮಾನ ಕೈಗೊಂಡಿದೆ.
ಈ ಕಾರಣದಿಂದಾಗಿ ನಗರದಲ್ಲಿ ಬಹುಮಟ್ಟಿಗೆ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಂತುಹೋಗಿದೆ. ಅಂಗಡಿಗಳಲ್ಲಿ ಕೂಡ ಪ್ಲಾಸ್ಟಿಕ್ ಚೀಲಗಳು ದೊರೆಯುವುದಿಲ್ಲ. ಗ್ರಾಹಕರಿಗೆ ವಸ್ತು ಗಳನ್ನು ಪೇಪರ್ನಲ್ಲಿ ಅಥವಾ ಕಾಟನ್ ಚೀಲಗಳಲ್ಲಿ ನೀಡಲಾಗುತ್ತದೆ.
ಮನವಿ: ಸಮ್ಮೇಳನಕ್ಕೆ ಬರುವವರು ಯಾವುದೇ ಪ್ಲಾಸ್ಟಿಕ್ ಚೀಲಗಳನ್ನು ತರಬಾರದು ಎಂದು ಸಮ್ಮೇಳನ ಸ್ವಾಗತ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.
ಪ್ಲಾಸ್ಟಿಕ್ ಚೀಲಗಳನ್ನು ಬಳಸುವವರನ್ನು ಕಂಡರೆ ಸ್ಥಳ ದಲ್ಲಿಯೇ ದಂಡ ವಿಧಿಸಲು ನಗರಸಭೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಸಮ್ಮೇಳನದ ನೈರ್ಮಲ್ಯ ಸಮಿತಿ ಅಧ್ಯಕ್ಷರೂ ಆದ ನಗರಸಭೆ ಆಯುಕ್ತ ಎನ್.ಎಂ. ಶಶಿ ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.