ಬೆಂಗಳೂರು: ‘ಮಡೆ ಮಡೆಸ್ನಾನ ಮತ್ತು ಪಂಕ್ತಿಭೇದ ವಿರೋಧಿಸಿ ಶನಿವಾರ ನಗರದಲ್ಲಿ ಮತ್ತು ಭಾನುವಾರ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.
ಉನ್ನತ ಜಾತಿಯವರು ಊಟ ಮಾಡಿದ ಎಂಜಲು ಎಲೆಗಳ ಮೇಲೆ ಕೆಳ ಜಾತಿಯವರು ಉರುಳಾಡುವ ಅನಿಷ್ಟ ಪದ್ಧತಿಯನ್ನು ಕೂಡಲೆ ನಿಷೇಧಿಸಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಉಡುಪಿಯ ಶ್ರೀಕೃಷ್ಣಮಠ ಸೇರಿದಂತೆ ಇತರ ಮಠಗಳಲ್ಲಿ ನಡೆಯುತ್ತಿರುವ ಪಂಕ್ತಿಭೇದವು ಜಾತಿ ವ್ಯವಸ್ಥೆಯ ಇನ್ನೊಂದು ಮುಖವಾಗಿದೆ. ಮೇಲ್ಜಾತಿ ಮತ್ತು ಕೆಳಜಾತಿಯವರಿಗೆ ಪ್ರತ್ಯೇಕವಾಗಿ ಊಟ ಹಾಕುವ ಪದ್ಧತಿಯು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಸರ್ಕಾರ ಕೂಡಲೇ ಇದಕ್ಕೆ ಸುಗ್ರೀವಾಜ್ಞೆ ತಂದು ಮಡೆ ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ನಿಷೇಧಿಸಬೇಕು ಎಂದರು.
ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿ ಅವರು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಕಳೆದ 3 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. 1979ರಿಂದ ಈ ವರೆಗೆ ಧರ್ಮಸ್ಥಳ, ಉಜಿರೆ ಸುತ್ತಮುತ್ತ 452 ಅಸಹಜ ಸಾವು ಸಂಭವಿಸಿವೆ. ಸರ್ಕಾರ ಈ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.