ಮೈಸೂರು: ಧಾರವಾಡದ ಜೆಎಸ್ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ನೀಡುವ 2011ರ `ಕಲಾಗುರು ಶ್ರೀ ಡಿ.ವಿ.ಹಾಲಭಾವಿ ಗೌರವ ಪ್ರಶಸ್ತಿ~ಗೆ ಖ್ಯಾತ ಕಲಾವಿದ ಹಾಗೂ ಕೇಂದ್ರ ಲಲಿತ ಕಲಾ ಅಕಾಡೆಮಿ ಸದಸ್ಯರೂ ಆದ ಜೆ.ಎಂ.ಎಸ್.ಮಣಿ ಅವರು ಆಯ್ಕೆ ಆಗಿದ್ದಾರೆ.
ಈ ಪ್ರಶಸ್ತಿಯು ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನ ಒಳಗೊಂಡಿದೆ. ಮಣಿ ಅವರು ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್ನಲ್ಲಿ ಚಿತ್ರಕಲೆ ವಿಷಯದಲ್ಲಿ ಶಿಕ್ಷಣ ಪಡೆದು, ನಂತರ ಅಲ್ಲಿಯೇ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ 2007ರಲ್ಲಿ ಸೇವೆಯಿಂದ ನಿವೃತ್ತರಾದರು. ಕಲಾ ಕ್ಷೇತ್ರದಲ್ಲಿ ಅನೇಕ ಹೊಸ ಪ್ರಯೋಗ ಮಾಡುವ ಜತೆಗೆ ಕೃತಿಗಳನ್ನೂ ರಚಿಸಿದ್ದಾರೆ.
ದೇಶದ ಪ್ರತಿಷ್ಠಿತ ಕಲಾ ಗ್ಯಾಲರಿಗಳಲ್ಲದೆ ನ್ಯೂಯಾರ್ಕ್, ಲಂಡನ್, ಸಿಂಗಪುರ, ಹಾಂಕಾಂಗ್ ಮುಂತಾದ ನಗರಗಳಲ್ಲಿ ನಡೆದ ಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ.
ಇವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಇಂಡಿಯನ್ ಆರ್ಟ್ ಮತ್ತು ಕ್ರಾಫ್ಟ್ ಸೊಸೈಟಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಕೆನ್ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ನೀಡುವ ಆರ್.ಎಂ. ಹಡಪದ ಪ್ರಶಸ್ತಿಗಳು ಸಂದಿವೆ.