ಕಳಸ: ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳನ್ನು ಸಮ ಪ್ರಮಾಣದಲ್ಲಿ ನೀಡುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಉತ್ತಮ ಇಳುವರಿ ಸಾಧ್ಯ ಎಂದು ಸಸ್ಯ ಶಾಸ್ತ್ರಜ್ಞ ಎಂ.ವೈ.ಕಟ್ಟಿ ಹೇಳಿದರು. ಪಟ್ಟಣದ ಕೆಸಿಎ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ತೋಟಗಾರಿಕಾ ಬೆಳೆಗಳ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ತೋಟಗಾರಿಕಾ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನೇ ನೀಡುವ ಪರಿಪಾಠವಿದೆ. ಆದರೆ ಈ ಬಗೆಯ ಅಭ್ಯಾಸದಿಂದ ಮಣ್ಣಿನಲ್ಲಿನ ಸೂಕ್ಷ್ಮಾಣು ಜೀವಿಗಳೆಲ್ಲ ನಾಶವಾಗುತ್ತವೆ.
ವರ್ಷದಲ್ಲಿ ಒಂದು ಬಾರಿ ರಾಸಾಯನಿಕ ಗೊಬ್ಬರ, ಮತ್ತೊಂದು ಬಾರಿ ಸಾವಯವ ಗೊಬ್ಬರವನ್ನು ನೀಡುವ ಮೂಲಕ ಮಣ್ಣಿನ ಗುಣಮಟ್ಟ ಕಾಯ್ದುಕೊಳ್ಳಬಹುದು ಎಂದರು.ಹಾರ್ಮೋನುಗಳ ಬಳಕೆಯಿಂದಲೂ ಗಿಡ-ಬೇರಿನ ಬೆಳವಣಿಗೆ ಪ್ರಚೋದಿಸಬಹುದು. ಮಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡಲೇಬೇಕು. ಪ್ರತಿ 3 ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕೆಂದರು.
ಬ್ಯಾಂಕ್ ಅಧ್ಯಕ್ಷ ಮಂಜಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗೋಪಾಲ ಗೌಡ, ಬೆಳೆಗಾರರಾದ ನರೇಂದ್ರ, ವಿಶ್ವನಾಥ ರಾವ್, ಶ್ರೆಕಾಂತ್ ಇದ್ದರು. ರೈತರು ತಂದಿದ್ದ ಮಣ್ಣಿನ ಮಾದರಿಗಳನ್ನು ಸಂಚಾರಿ ಮಣ್ಣು ಪರೀಕ್ಷಾ ಘಟಕದ ಮೂಲಕ ಪರೀಕ್ಷಿಸಲಾಯಿತು.