ಮಂಡ್ಯ: ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತು ಸೆಕ್ಟರ್ ಅಧಿಕಾರಿಗಳು ನಿಗಾ ವಹಿಸಬೇಕು ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್ರವರು ಸೂಚಿಸಿದರು.
ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಸೆಕ್ಟರ್ ಅಧಿಕಾರಿಗಳ ತರಬೇತಿಯಲ್ಲಿ ಅವರು ಮಾತನಾಡಿದರು.
ಸೆಕ್ಟರ್ ಮ್ಯೋಪ್ಗಳನ್ನು ಸಿದ್ಧಪಡಿಸಿಕೊಳ್ಳಬೇಕು. ತಮ್ಮ ವ್ಯಾಪ್ತಿಗೆ ಬರುವ ಮತ ಕೇಂದ್ರಗಳ ಮೂಲ ಸೌಕರ್ಯ ಪರಿಶೀಲಿಸಿ, ಮತಕೇಂದ್ರದ ಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದರು.
ಚುನಾವಣಾ ಪ್ರಚಾರದ ಬಹಿರಂಗ ಸಭೆ, ರ್ಯಾಲಿ ನಡೆಸಲು, ಮೊಬೈಲ್, ರೇಡಿಯೊ ಮೆಸೆಜ್ ನೀಡಲು ರಿಟರ್ನಿಂಗ್ ಆಫೀಸ್ ಅವರ ಅನುಮತಿ ಪಡೆದಿರಬೇಕು. ಇಲ್ಲವಾದಲ್ಲಿ ಪ್ರಚಾರ ಕೈಗೊಂಡವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲಿಸುವಂತೆ ಸೂಚಿಸಿದರು.
ಹಿಂದಿನ ಚುನಾವಣೆಗಳಲ್ಲಿ ಮತದಾರರ ಸ್ಲಿಪ್ಗಳನ್ನು ಮತದಾರರಿಗೆ ಪಕ್ಷಗಳವರು ನೀಡುತ್ತಿದ್ದರು. ಈ ಬಾರಿ ಸ್ಲಿಪ್ಗಳನ್ನು ಮತದಾನದ ಒಂದು ವಾರ ಮುಂಚಿತವಾಗಿ ಬೂತ್ ಲೆವಲ್ ಆಫೀಸರ್ಸ್ಗಳು ವಿತರಿಸಲಿದ್ದಾರೆ. ವಿತರಣೆಯು ಸರಿಯಾಗಿ ನಡೆಯುತ್ತಿರುವ ಬಗ್ಗೆ ಸೆಕ್ಟರ್ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಚುನಾವಣಾ ತಹಶೀಲ್ದಾರ್ ಸೋಮ್ಕುಮಾರ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಭರಿಸುವ ಚುನಾವಣಾ ವೆಚ್ಚಗಳ ಮೇಲೆ ನಿಗಾ ವಹಿಸಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಭಯಕ್ಕೆ ಒಳಪಟ್ಟು ಆಥವಾ ಬೇರೆ ಯಾವುದೇ ಕಾರಣದಿಂದಾಗಿ ಮತದಾನ ಮಾಡಲು ಹಿಂಜರಿಯುವ ಪ್ರದೇಶಗಳಿದ್ದಲ್ಲಿ ಸೆಕ್ಟರ್ ಅಧಿಕಾರಿಗಳು ಗುರುತಿಸಿ, ವರದಿ ನೀಡಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಪೂರ್ಣಿಮಾ, ಮಹೇಶ್, ಉಪ ವಿಭಾಗಾಧಿಕಾರಿ ಆರ್. ಲತಾ, ಎಂ.ಎಸ್.ಎನ್. ಬಾಬು ಮತ್ತಿತರರು ಪಾಲ್ಗೊಂಡಿದ್ದರು.