ಲಖನೌ: ಲಖನೌ, ಉತ್ತರ ಪ್ರದೇಶದ ರಾಜಧಾನಿ. ಹೆಸರಿಗೆ ದೊಡ್ಡ ನಗರವಾದರೂ ಸಮಸ್ಯೆಗಳು ಹತ್ತಾರು. ಉತ್ತರದಲ್ಲಿ ದೆಹಲಿಯ ನಂತರದ ಸ್ಥಾನದಲ್ಲಿರುವ ಈ ಮಹಾನಗರ ಯಾವ ಪ್ರಮಾಣದಲ್ಲಿ ಬೆಳವಣಿಗೆ ಆಗಬೇಕಿತ್ತೊ ಅಷ್ಟು ಆಗಿಲ್ಲ. ರಾಜಧಾನಿ ಜೀವನದಿ ಗೋಮತಿ ಮಾಲಿನ್ಯ, ಅನಧಿಕೃತವಾಗಿ ತಲೆ ಎತ್ತಿರುವ ಬಡಾವಣೆಗಳು, ಕಿರಿದಾದ ರಸ್ತೆಗಳಿಂದಾಗಿ ಪದೇ ಪದೇ ಅಸ್ತವ್ಯಸ್ತಗೊಳ್ಳುವ ಸಂಚಾರ, ನಿರಂತರವಾಗಿ ಕಾಡುವ ವಿದ್ಯುತ್ ಸಮಸ್ಯೆ, ಕಿತ್ತುತಿನ್ನುವ ನಿರುದ್ಯೋಗದ ಸುಳಿಯಲ್ಲಿ ಗಿರಕಿ ಹೊಡೆಯುತ್ತಿದೆ.
ರಾಜ್ಯದ ರಾಜಧಾನಿ ಮೂಲಸೌಲಭ್ಯಗಳ ಕೊರತೆಯಿಂದ ಸೊರಗಿದೆ. ಹೊಸ ಉದ್ಯಮಗಳು ಬರುವುದು ಹೋಗಲಿ, ಇರುವ ಹಳೇ ಉದ್ಯಮಗಳು ಬಾಗಿಲು ಮುಚ್ಚಿವೆ. ವಾಹನಗಳ ಬಿಡಿ ಭಾಗ ತಯಾರಿಸುತ್ತಿದ್ದ ‘ಟೆಲ್ಕೊ’ ಬಂದ್ ಆಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಕೆಲವು ಘಟಾನುಘಟಿಗಳು ಅನೇಕ ಸಲ ಆಯ್ಕೆಯಾಗಿದ್ದರೂ ಲಖನೌದ ಸಾಮಾಜಿಕ– ಆರ್ಥಿಕ ಚಿತ್ರಣ ಬದಲಾಗಿಲ್ಲ. ಆದರೆ, ಲಖನೌ ಏನಾದರೂ ಅಲ್ಪಸ್ವಲ್ಪ ಅಭಿವೃದ್ಧಿ ಆಗಿದ್ದರೆ, ವಾಜಪೇಯಿ ಅವರ ಕಾಲದಲ್ಲಿ ಎಂದು ಜನ ಸ್ಮರಿಸುತ್ತಾರೆ.
ವಾಜಪೇಯಿ ಅವರಿಗೆ ಲಖನೌ ಹೆಚ್ಚುಕಡಿಮೆ ಎರಡು ದಶಕ ರಾಜಕೀಯ ಆಶ್ರಯ ನೀಡಿತ್ತು. 2009ರ ಚುನಾವಣೆಯಲ್ಲಿ ಲಾಲ್ಜಿ ಟಂಡನ್ ಆಯ್ಕೆಯಾಗಿದ್ದರು. ಆಗ ಚುನಾವಣೆ ಪ್ರಚಾರಕ್ಕೆ ವಾಜಪೇಯಿ ಅವರ ಪಾದರಕ್ಷೆ ಬಳಸಿಕೊಂಡು ಲಾಲ್ಜಿ ಇತಿಹಾಸ ಸೃಷ್ಟಿಸಿದರು. ಈಗ ರಾಜಧಾನಿಯಿಂದ ಅಖಾಡಕ್ಕಿಳಿದಿರುವ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಶಾಲೊಂದನ್ನು ಪ್ರಚಾರಕ್ಕೆ ಬಳಸುತ್ತಿದ್ದಾರೆ.
‘ಲಖನೌದಿಂದ ಚುನಾವಣೆಗೆ ಸ್ಪರ್ಧಿಸುವಂತೆ ವಾಜಪೇಯಿ ಅವರೇ ನನಗೆ ಸಲಹೆ ಮಾಡಿದ್ದಾರೆ. ಅವರನ್ನು ಕಾಣಲು ಹೋಗಿದ್ದ ನನ್ನನ್ನು ಆಶೀರ್ವದಿಸಿ, ಶಾಲೊಂದನ್ನು ಪ್ರೀತಿಯ ಸಂಕೇತವಾಗಿ ಕೊಟ್ಟಿದ್ದಾರೆ’ ಎಂದು ರಾಜನಾಥ್ ಪ್ರಚಾರ ಸಭೆಗಳಲ್ಲಿ ಹೇಳುತ್ತಿದ್ದಾರೆ. ಹೆಗಲ ಮೇಲಿನ ಶಾಲನ್ನು ತೋರಿಸುತ್ತಿದ್ದಾರೆ. ವಾಜಪೇಯಿ ಅವರ ಜನಪ್ರಿಯತೆ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಪೂರ್ಣಗೊಂಡಿರುವ ಮಾಜಿ ಪ್ರಧಾನಿಯ ಕನಸನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ, ವಾಜಪೇಯಿ ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ಗೊತ್ತಿರುವ ಅನೇಕ ಪ್ರಜ್ಞಾವಂತರು ರಾಜನಾಥ್ ಅವರ ಬಗ್ಗೆ ಗೇಲಿ ಮಾಡುತ್ತಿದ್ದಾರೆ.
ಠಾಕೂರ್ ಸಮುದಾಯಕ್ಕೆ ಸೇರಿದ ರಾಜನಾಥ್ ಸಿಂಗ್ ತಮ್ಮ ಪಕ್ಷದೊಳಗಿರುವ ವಿರೋಧಿಗಳ ಬಾಯಿ ಮುಚ್ಚಿಸಲು ವಾಜಪೇಯಿ ಹೆಸರನ್ನು ಬಳಸಿಕೊಳ್ಳುವ ತಂತ್ರ ಮಾಡಿದ್ದಾರೆ. ಕ್ಷೇತ್ರ ಕಳೆದುಕೊಂಡು ಒಳಗೊಳಗೆ ಕುದಿಯುತ್ತಿರುವ ಲಾಲ್ಜಿ ಮಾಜಿ ಪ್ರಧಾನಿ ನಿಕಟವರ್ತಿ. ಈಗ ಪಕ್ಷದೊಳಗೆ ನರೇಂದ್ರ ಮೋದಿ ಅವರ ಪ್ರಾಬಲ್ಯ ಇರುವುದರಿಂದ ಅಸಹಾಯಕರಾಗಿ ಕುಳಿತಿದ್ದಾರೆ. ಪಕ್ಷದ ಮುಖಂಡರು ಲಾಲ್ಜಿ ಅವರಿಗೆ ಪಕ್ಷ ಅಧಿಕಾರಕ್ಕೆ ಬಂದರೆ ರಾಜಕೀಯ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರಂತೆ.
ರಾಜ್ನಾಥ್, 2009ರ ಲೋಕಸಭಾ ಚುನಾವಣೆಯಲ್ಲಿ ಘಾಜಿಯಾಬಾದ್ನಿಂದ ಆಯ್ಕೆಯಾಗಿದ್ದರು. ಈ ಸಲ ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಘಾಜಿಯಾಬಾದ್ ಜನ ಮತ್ತೆ ತಮ್ಮನ್ನು ಬೆಂಬಲಿಸುವುದಿಲ್ಲ ಎನ್ನುವ ಕಾರಣಕ್ಕೆ ಲಖನೌಗೆ ಬಂದಿದ್ದಾರೆ. ರಾಜನಾಥ್ ಇಲ್ಲಿಂದ ಸ್ಪರ್ಧಿಸಬೇಕು ಎನ್ನುವುದು ಅವರೊಬ್ಬರ ತೀರ್ಮಾನವಲ್ಲ. ಇಡೀ ಪಕ್ಷದ್ದು ಎಂದು ಚುನಾವಣೆ ಮೇಲ್ವಿಚಾರಕರು ಹೇಳುತ್ತಿದ್ದಾರೆ. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಹಾಗೂ ರಾಜನಾಥ್ ಸಿಂಗ್ ಆತ್ಮೀಯ ಸ್ನೇಹಿತರು. ಅದೇ ಕಾರಣಕ್ಕೆ 2009ರ ಚುನಾವಣೆಯಲ್ಲಿ ರಾಜನಾಥ್ ಅವರ ವಿರುದ್ಧ ಎಸ್ಪಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ.
ಈ ಚುನಾವಣೆಯಲ್ಲಿಯೂ ಅಭ್ಯರ್ಥಿ ಕಣಕ್ಕಿಳಿಸಿದ್ದರೂ, ಪರೋಕ್ಷವಾಗಿ ರಾಜನಾಥ್ ಗೆಲುವಿಗೆ ಸಹಕರಿಸುತ್ತಿದೆ. ರಾಜನಾಥ್ ಅವರೂ ಮುಲಾಯಂ ಋಣ ತೀರಿಸಲು ಮೈನ್ಪುರಿಯಲ್ಲಿ ಹೊಸಬರಿಗೆ ಟಿಕೆಟ್ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಕಾಂಗ್ರೆಸ್ ಲಖನೌದಿಂದ ರೀಟಾ ಬಹುಗುಣ ಅವರಿಗೆ ಟಿಕೆಟ್ ನೀಡಿದೆ. ಹಿರಿಯ ರಾಜಕಾರಣಿ ಎಚ್.ಎನ್. ಬಹುಗುಣ ಅವರ ಮಗಳಾದ ರೀಟಾ ಬಹುಗುಣ 2009ರ ಚುನಾವಣೆಯಲ್ಲಿ ಲಾಲ್ಜಿ ಅವರ ವಿರುದ್ಧ 35 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈಗ ಅವರು ‘ಕಂಟೋನ್ಮೆಂಟ್ ಕ್ಷೇತ್ರ’ದಿಂದ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಸಮಾಜವಾದಿ ಪಕ್ಷ ಅಭಿಷೇಕ್ ಮಿಶ್ರಾ ಬಿಎಸ್ಪಿ ನಕುಲ್ ದುಬೆ ಅವರನ್ನು ಕಣಕ್ಕಿಳಿಸಿವೆ. ಸಿನಿಮಾ ನಟ ಜಾವಿದ್ ಜಾಫ್ರಿ ಎಎಪಿಯಿಂದ ಸ್ಪರ್ಧಿಸಿದ್ದಾರೆ.
ಲಖನೌ ಕ್ಷೇತ್ರದ ‘ಸಾಮಾಜಿಕ ಸಂರಚನೆ’ ರಾಜ್ನಾಥ್ ಅವರಿಗೆ ಅನುಕೂಲವಾಗದಿದ್ದರೂ, ಮೋದಿ ಜನಪ್ರಿಯತೆ ನೆರವಿಗೆ ಬರಲಿದೆ ಎನ್ನುವುದು ಸ್ಥಳೀಯ ಬಿಜೆಪಿ ಮುಖಂಡರ ಲೆಕ್ಕಾಚಾರ. ರಾಜಧಾನಿಯಲ್ಲಿ ಐದು ಲಕ್ಷ ವೈಶ್ಯರು, ನಾಲ್ಕು ಲಕ್ಷ ಮುಸ್ಲಿಮರು, 3.5 ಲಕ್ಷ ಬ್ರಾಹ್ಮಣರು, 2.5 ಲಕ್ಷ ಹಿಂದುಳಿದ ವರ್ಗಗಳು, ಉತ್ತರಾಖಂಡದಿಂದ ವಲಸೆ ಬಂದಿರುವ 1.5 ಲಕ್ಷ ಮತದಾರರಿದ್ದಾರೆ. ಮುಸ್ಲಿಮರ ಬೆಂಬಲ ಪಡೆಯಲು ರಾಜನಾಥ್ ಪ್ರಯತ್ನಿಸುತ್ತಿದ್ದಾರೆ. ಷಿಯಾ ಸಮುದಾಯದ ಮುಖಂಡ ಮೌಲಾನ ಕಲ್ಬೆ ಜಾವೇದ್ ಅವರನ್ನು ಭೇಟಿ ಮಾಡಿದ್ದರು. ಷಿಯಾ ಮುಸ್ಲಿಮರು ಹಿಂದೆ ವಾಜಪೇಯಿ ಅವರನ್ನು ಬೆಂಬಲಿಸಿದ್ದಾರೆ. ಆಗಿನ ರಾಜಕೀಯ ಪರಿಸ್ಥಿತಿ ಬೇರೆಯಾಗಿತ್ತು. ಇದು ಮೋದಿ ಕಾಲ. ಮೋದಿ ಅವರನ್ನು ಪ್ರಧಾನಿ ಮಾಡಲು ಹೊರಟಿರುವ ಪಕ್ಷವನ್ನು ಬೆಂಬಲಿಸುವ ಸಾಧ್ಯವಿಲ್ಲ ಎಂದು ಜಾವೇದ್ ಹೇಳಿದ್ದಾರೆ.
ಮೋದಿ ಅವರನ್ನು ಸೋಲಿಸಬೇಕು ಎನ್ನುವುದು ಅಲ್ಪಸಂಖ್ಯಾತರ ಒಂದಂಶದ ಕಾರ್ಯಕ್ರಮ. ಬ್ರಾಹ್ಮಣರ ಮತಗಳು ಕಾಂಗ್ರೆಸ್, ಬಿಎಸ್ಪಿ ಹಾಗೂ ಎಸ್ಪಿ ನಡುವೆ ಹಂಚಿಕೆ ಆಗಲಿದೆ. ಈ ವಿಭಜನೆಯಿಂದ ರಾಜನಾಥ್ ಅವರಿಗೆ ಲಾಭವಾಗಲಿದೆ. ಉಳಿದಂತೆ ಬಿಜೆಪಿಗೆ ನಿಷ್ಠವಾಗಿರುವ ಮತಗಳು ರಾಜನಾಥ್ ಅವರಿಗೆ ಹೋಗಲಿದೆ.
ಹೊಸ ಮತದಾರರು ಮೋದಿ ಅವರತ್ತ ನೋಡುತ್ತಿದ್ದಾರೆ. ಮೋದಿ ಬದಲಾವಣೆ ತರಬಲ್ಲರು ಎಂದು ಲಖನೌ ಸ್ನಾತಕೋತ್ತರ ವಿದ್ಯಾರ್ಥಿ ರಿತೀಕ ಶುಕ್ಲಾ ಹೇಳುತ್ತಾರೆ. ರಿತೀಕ ಅವರ ಮಾತನ್ನು ಲಖನೌ ವಿವಿ ಉಪನ್ಯಾಸಕ ಡಾ. ಪುನಿತ್ ಕುಮಾರ್ ಅನುಮೋದಿಸುತ್ತಾರೆ. ಮೋದಿ ಹಣದುಬ್ಬರ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಲ್ಲರು ಎಂದು ಸ್ಥಳೀಯ ನಿವಾಸಿ ಎಂ. ಶ್ರೀವಾತ್ಸವ ನಿರೀಕ್ಷಿಸುತ್ತಾರೆ.
ವಾಜಪೇಯಿ ಜನಪ್ರಿಯತೆಗೆ ಜೋತು ಬೀಳಲು ಪ್ರಯತ್ನಿಸುತ್ತಿರುವ ರಾಜನಾಥ್ ಅವರಿಗೆ ಲಖನೌ ಒಲಿಯಲಿದೆಯೇ ಎನ್ನುವ ಪ್ರಶ್ನೆ ಈ ತಿಂಗಳ 30ರಂದು ನಡೆಯುವ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.