ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದ ಕಲಾ ಜಾಥಾ ಅಭಿಯಾನಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಸಿದ್ದಯ್ಯ ತಮಟೆ ಬಾರಿಸುವ ಮೂಲಕ ಸೋಮವಾರ ಚಾಲನೆ ನೀಡಿದರು.
ಒಟ್ಟು 18 ಕಲಾತಂಡ ರಚಿಸಲಾಗಿದ್ದು, ಈ ತಂಡಗಳು ಮತದಾರರಲ್ಲಿ ನಾಟಕ ಹಾಗೂ ವಿವಿಧ ಕಲಾ ಜಾಥಾ ಕಾರ್ಯಕ್ರಮಗಳ ಮೂಲಕ ಮತದಾನದ ಸಂದೇಶ ಸಾರಲಿವೆ. ಸದರಿ ತಂಡಗಳು ಬಸ್ ನಿಲ್ದಾಣ, ಮಾರುಕಟ್ಟೆ, ಉದ್ಯಾನವನ, ಮಾಲ್ಗಳು, ಐಟಿ-ಬಿಟಿ ಕಂಪೆನಿಗಳ ಆವರಣ, ಅಪಾರ್ಟ್ಮೆಂಟ್ ಹಾಗೂ ಪ್ರಮುಖ ವೃತ್ತಗಳಲ್ಲಿ ಹಾಡು, ನಾಟಕ, ರೂಪಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿವೆ ಎಂದು ತಿಳಿಸಿದರು. ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸಲು ವ್ಯಾಪಕ ಕ್ರಮ ಹಾಕಿಕೊಂಡಿದೆ.
ಜಾನಪದ ಗಾಯಕ ಜೋಗಿಲ ಸಿದ್ಧರಾಜು ತಂಡಗಳ ನಿರ್ವಹಣೆ ಮಾಡಲಿದ್ದಾರೆ. ಮತದಾನ ಸಮೀಪಿಸುವವರೆಗೂ ಈ ತಂಡಗಳು ಹಲವಾರು ನಾಟಕಗಳನ್ನು ಪ್ರದರ್ಶಿಸಲಿದ್ದು, ಮತದಾನ ಮಾಡಲು ಪ್ರೇರೇಪಿಸಲಿವೆ ಎಂದು ಹೇಳಿದರು.