ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಜಾಗೃತಿ: ಬಾನಲ್ಲಿ ಹಾರಾಡಿದ ಜಿಲ್ಲಾಧಿಕಾರಿ

Last Updated 20 ಏಪ್ರಿಲ್ 2013, 11:27 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿಯ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಶುಕ್ರವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದವರಿಗೆ ಅಚ್ಚರಿ ಕಾದಿತ್ತು. ಅದೆನೆಂದರೆ ಜಿಲ್ಲಾಧಿಕಾರಿ ಇಮ್‌ಕೊಂಗ್ಲಾ ಜಮೀರ್ ಪ್ಯಾರಾಗ್ಲೈಡಿಂಗ್ ಮಾಡುವ ಮೂಲಕ ಬಾನಲ್ಲಿ ಹಾರಾಡಿ ಎಲ್ಲರ ಹುಬ್ಬೆರುವಂತೆ ಮಾಡಿದರು.

ಮತದಾರರಿಗೆ ಜಾಗೃತಿ ಮೂಡಿಸುವ ಚುನಾವಣಾ ಆಯೋಗದ ವಿನೂತನ ಪ್ರಯೋಗ ರೋಮಾಂಚನ ಅನುಭವ ನೀಡುವುದರೊಂದಿಗೆ ಜಾಗೃತಿಯ ಮೂಡಿಸುವಲ್ಲಿಯೂ ಯಶಸ್ವಿಯಾಯಿತು.

`ದೇಶದ ಭದ್ರ ಭವಿಷ್ಯ ರೂಪಿಸಲು ತಪ್ಪದೇ ಮತಚಲಾಯಿಸಿ', `ಸಬೂಬು ಬೇಡ; ಮತದಾನ ಮರೆಯಬೇಡ', ಎನ್ನುವ ಸಂದೇಶದೊಂದಿಗೆ ಜಿಲ್ಲಾಧಿಕಾರಿ ಜಮೀರ್ ಬಾನಿಗೆ ಹಾರಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ನಗರದ ಪ್ರಮುಖ ರಸ್ತೆಗಳ ಮೇಲೆ ಬೀಳಿಸಿದರು.

`ಮೇಘಾಲಯದಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಆಹ್ವಾನ ನೀಡಿ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು. ಆ ಪ್ರದರ್ಶನ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕದಲ್ಲಿ ಪ್ರದರ್ಶನ ನೀಡುವ ಅವಕಾಶ ದೊರಕಿದೆ' ಪ್ಯಾರಾಗ್ಲೈಡಿಂಗ್ ತಂಡದ ಮುಖ್ಯಸ್ಥ ನಿಕೊಲಾಯ್ ಸಿಂಗ್ ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಾಯ ಕಾಮತ್ ಪ್ಯಾರಾಗ್ಲೈಡಿಂಗ್‌ಗೆ ಹಸಿರು ನಿಶಾನೆ ತೋರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್, ನಗರಸಭೆ ಆಯುಕ್ತ ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣ ಸಿದ್ದಪ್ಪ ಹಾಜರಿದ್ದರು.

ಬಾನಿಂದ ಬಿತ್ತು ಕರಪತ್ರ!
ಮತದಾನದ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಗರದ ರವೀಂದ್ರನಾಥ ಕಡಲತೀರದಲ್ಲಿ ಹಮ್ಮಿಕೊಂಡಿದ್ದ ಪ್ಯಾರಾಗ್ಲೈಡಿಂಗ್ ಸಾರ್ವಜನಿಕರ ಗಮನ ಸೆಳೆಯಿತು.

ಬೆಟ್ಟಗುಡ್ಡದಂತಹ ಪ್ರದೇಶಗಳಲ್ಲಿ ಹೆಚ್ಚು ಹಾರಾಟ ನಡೆಸುವ ಪ್ಯಾರಾ ಗ್ಲೈಡರ್ ಏಕಾಏಕಿ ಕಡಲತೀರದಲ್ಲಿ ಹಾರಾಡುತ್ತಿರುವುದನ್ನು ನೋಡಿ ಅಚ್ಚರಿಪಟ್ಟ ಸಾರ್ವಜನಿಕರು ಗ್ಲೈಡರ್‌ನಿಂದ ಬಿದ್ದ ಮತದಾನದ ಕರಪತ್ರಗಳನ್ನು ಗಂಭೀರವಾಗಿ ಓದಿದರು.

ಗ್ಲೈಡರ್ ವಿಶೇಷ: ಮೂರು ಚಕ್ರಗಳನ್ನು ಒಳಗೊಂಡ ಸೈಕಲ್ ಮಾದರಿಯ ವಾಹನ ಹಾಗೂ ಪ್ಯಾರಾಚೂಟ ಒಳಗೊಂಡ ಪ್ಯಾರಾಗ್ಲೈಡಿಂಗ್ 450 ಕೆಜಿ ಭಾರ ಹೊಂದಿದೆ. ಆಗಸದಲ್ಲಿ ಇದು ಸತತ 3ಗಂಟೆಗಳ ಕಾಲ ಹಾರುವ ಸಾಮರ್ಥ್ಯ ಹೊಂದಿದೆ. ನೆಲದಿಂದ 18 ಸಾವಿರ ಅಡಿ ಎತ್ತರದವರೆಗೆ ಹಾರುವ ಸಾಮರ್ಥ್ಯ ಪ್ಯಾರಾಗ್ಲೈಡರ್‌ಗೆ ಇದೆ.

ಪ್ಯಾರಾಗ್ಲೈಡಿಂಗ್ ಅನ್ನು ವಿಪತ್ತು ನಿರ್ವಹಣೆಯ ಸಂದರ್ಭಗಳಲ್ಲಿ ಹಳ್ಳಿಗಳಲ್ಲಿ ವೈದ್ಯಕೀಯ ಕಿಟ್ ಒದಗಿಸಲು ಹಾಗೂ ಜಾಲಿ ರೈಡ್‌ಗೂ ಬಳಸಲಾಗುತ್ತದೆ.

`ಮೂರು ವರ್ಷಗಳ ಹಿಂದೆ ಮೇಘಾಲಯದಲ್ಲಿ ಫುಟ್‌ಲಾಂಚ್ ಗ್ಲೈಡರ್ ಎಂಬ ಪ್ಯಾರಗ್ಲೈಡಿಂಗ್ ತರ ನೆಲದಲ್ಲಿ ಕ್ರಮಿಸುವ ಸಾಧನದ ಬಗ್ಗೆ ಅಲ್ಲಿನ ಖಾಝಿರಂಗ ನ್ಯಾಷನಲ್ ಪಾರ್ಕ್‌ನಲ್ಲಿ ನೀಡಿದ ಪ್ರದರ್ಶನ ತನ್ನ ಜೀವನದ ದಿಕ್ಕನ್ನೇ ಬದಲಿಸಿತು ಎಂದು' ಪ್ಯಾರಾಗ್ಲೈಡರ್ ನಿಕೊಲಾಯ್ ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT