ಬಳ್ಳಾರಿ: ನೈತಿಕ ಮತದಾನದ ಹಿನ್ನೆಲೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿ ಬುಧವಾರ ಬೀದಿನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಜಿಲ್ಲಾ ಪಂಚಾಯಿತಿ ಸಿಇಓ ಮಂಜುನಾಥ್ ನಾಯಕ, ಗ್ರಾಮೀಣ ಪ್ರದೇಶದ ಜನರ ಮೆಚ್ಚಿನ ಬೀದಿನಾಟಕದ ಮೂಲಕ ಕಡಿಮೆ ಮತದಾನ ದಾಖಲಾದ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಮತದಾರರು ಮುಕ್ತವಾಗಿ ಮತಗಟ್ಟೆಗೆ ಆಗಮಿಸಿ ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತದಾನದ ಪ್ರಮಾಣ ಹೆಚ್ಚಿದಷ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗುತ್ತದೆ. ಗ್ರಾಮೀಣ ಪ್ರದೇಶ ದಲ್ಲಿ ಅನಕ್ಷರಸ್ಥ ಮತದಾರರನ್ನು ಜಾಗೃತಗೊಳಿಸಲು ಬೀದಿನಾಟಕ, ವಸ್ತು ಪ್ರದರ್ಶನ, ಆಡಿಯೋ, ವೀಡಿಯೋ ಪ್ರದರ್ಶನ, ಡಂಗೂರ ಸೇರಿದಂತೆ ವಿವಿಧ ಪ್ರಕಾರಗಳ ಮಾಧ್ಯಮ ಬಳಕೆ ಮಾಡಲಾಗಿದೆ ಎಂದರು.
ಮತದಾರರೊಂದಿಗೆ ಸಂಪರ್ಕ ಹೊಂದಿರುವ ಯುವಕ, ಯುವತಿ ಮಂಡಳಿಗಳು, ಸ್ವ- ಸಹಾಯ ಸಂಘ, ಅಂಗನವಾಡಿಗಳ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕುರುವಳ್ಳಿ ಜಾಗೃತಿ ಕಲಾ ಬಳಗದ ಕಲಾವಿದರಾದ ತಿಮ್ಮಯ್ಯ ಮತ್ತು ತಂಡದವರು `ನೈತಿಕ ಮತದಾನ' ಎಂಬ ಬೀದಿ ನಾಟಕ ಪ್ರದರ್ಶಿಸಿದರು. ಈ ಸಂದರ್ಭ ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ, ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ರಾಧಾಕೃಷ್ಣ ರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಾಂದ್ಬಾಷಾ, ಮತ್ತಿತರರು ಉಪಸ್ಥಿತರಿದ್ದರು.