ದಾವಣಗೆರೆ: ಮತದಾರ ಮಾಡುವ ಜನಪ್ರತಿನಿಧಿಯ ಆಯ್ಕೆ ಆತನ ಅಭಿರುಚಿಯನ್ನು ಸೂಚಿಸುತ್ತದೆ ಎಂದು ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಸ್. ಇಂದುಮತಿ ಹೇಳಿದರು.
ಚುನಾವಣಾ ಆಯೋಗ, ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಲಾದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳ ಆಯ್ಕೆಯಲ್ಲಿ ಯುವಜನರ ಪಾತ್ರ ದೊಡ್ಡದು. ವಿಶ್ವದ ಜನಸಂಖ್ಯೆಯ ಶೇ. 17ರಷ್ಟು ಭಾರತೀಯರು ಇದ್ದಾರೆ. ಆದರೆ, ಅವರ ಪೈಕಿ ಕೇವಲ ಶೇ. 25ರಷ್ಟು ಮಂದಿ ಗುರುತಿನ ಚೀಟಿ ಹೊಂದಿದ್ದಾರೆ. ಎಲ್ಲರಿಗೂ ಅದು ಸಿಗುವಂತಾಗಬೇಕು. ಎಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 13,39,740 ಮತದಾರರು ಇದ್ದಾರೆ. ಶೇ. 97.28ರಷ್ಟು ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಇದರಿಂದಾಗಿ ಚುನಾವಣಾ ಸಂದರ್ಭ ಗೊಂದಲ ರಹಿತ, ಶಾಂತಿಯುತ ಮತದಾನಕ್ಕೆ ಅವಕಾಶವಾಗಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎಚ್.ಎಸ್. ವೆಂಕಟೇಶ್ ಮಾತನಾಡಿ, ಯುವ ಮತದಾರರು ಮತದಾನದ ಬಗ್ಗೆ ಅಸಡ್ಡೆ ತೋರ ಬಾರದು. ಪ್ರತಿಯೊಂದು ಮತವೂ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು.