ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಮನಸ್ಥಿತಿ ಬದಲಾಗಲಿ: ಹೆಗ್ಡೆ

Last Updated 2 ಜೂನ್ 2011, 18:50 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದ ಮತದಾರರ ಮನಸ್ಥಿತಿ ಈಗಲಾದರೂ ಬದಲಾಗಬೇಕು. ಇಲ್ಲದಿದ್ದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚುಕಾಲ ಉಳಿಯುವುದಿಲ್ಲ~ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಸರ್ವೋದಯ ಇಂಟರ್‌ನ್ಯಾಷನಲ್ ಟ್ರಸ್ಟ್ ನಗರದ ಸೆಂಟ್ರಲ್ ಕಾಲೇಜು ಬಳಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿನ ಉಪನ್ಯಾಸ ಕೊಠಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಮಾಧವ ಗೋಡ್‌ಬೋಲೆ ಅವರ `ಪ್ರಯೋಗದ ಹಾದಿಯಲ್ಲಿ ಭಾರತದ ಸಂಸದೀಯ ಪ್ರಜಾಪ್ರಭುತ್ವ~ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಪ್ರಜಾಪ್ರಭುತ್ವವೆಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಸರ್ಕಾರ ಎಂಬ ಜನಪ್ರಿಯ ಮಾತಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಇರುವ ಸರ್ಕಾರ ಎಂಬಂತಾಗಿದೆ~ ಎಂದು ಬೇಸರ ವ್ಯಕ್ತಪಡಿಸಿದರು.

`ಸಂಸತ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಮಹತ್ವದ ಮಸೂದೆಗಳ ಬಗ್ಗೆ ಚರ್ಚೆ ನಡೆಯದೇ ಅನುಮೋದನೆ ನೀಡಲಾಗುತ್ತದೆ. ಬಹುಪಾಲು ಸಂಸದರಿಗೆ ಮಸೂದೆಯ ಶೀರ್ಷಿಕೆಗಳು ಸಹ ಗೊತ್ತಿರುವುದಿಲ್ಲ. ಈ ರೀತಿ ನಡೆದರೆ ಪ್ರಜಾಪ್ರಭುತ್ವದ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವೇ ಇಲ್ಲ~ ಎಂದರು.

`ಮಹತ್ವದ ವಿಷಯಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಯುತ್ತಿಲ್ಲ. ಹಾಗಾಗಿ ಜನಲೋಕಪಾಲ್ ಮಸೂದೆಯ ಬಗ್ಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಚಿಂತಿಸುವಂತೆ ಮಾಡಲು ಗಾಂಧಿವಾಧಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸಬೇಕಾಯಿತು~ ಎಂದು ಹೇಳಿದರು.

`ಮತದಾನ ಮಾಡುವುದು ಕಡ್ಡಾಯವಾಗಬೇಕು. ಬಹಳಷ್ಟು ಸಂಸದರು ಅಧಿವೇಶನದ ಸಂದರ್ಭದಲ್ಲಿ ಮಾತನಾಡುವುದೇ ಇಲ್ಲ. ಹಾಗಾಗಿ ಜನರಿಗೆ ಸ್ಪಂದಿಸದ ಹಾಗೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಜನಪ್ರತಿನಿಧಿಯನ್ನು ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಬರಬೇಕು~ ಎಂದು ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, `ಸಂವಿಧಾನದ ನೈತಿಕ ಮೌಲ್ಯಗಳನ್ನು ಪಾಲಿಸದಿದ್ದರೆ ಸಂವಿಧಾನದ ಆಶಯ ಈಡೇರುವುದಿಲ್ಲ. ಕೊನೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕುಸಿದು ಬೀಳುವ ಅಪಾಯವಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ~ ಎಂದರು.
`ಕೇವಲ ರಾಜಕಾರಣಿಯ ಮನಸ್ಥಿತಿ ಬದಲಾದರಷ್ಟೇ ಸಾಲದು, ಮತದಾರರ ಮನೋಭಾವವು ಬದಲಾಗಬೇಕು~ ಎಂದು ಹೇಳಿದರು.

ಮಾಧವ ಗೋಡ್‌ಬೋಲೆ ಮಾತನಾಡಿ, `ದೇಶದ ಸಾರ್ವಭೌಮತೆಯ ಪ್ರತೀಕದಂತಿರುವ ಸಂಸತ್ತಿನ ಮೌಲ್ಯ ಕುಸಿಯುತ್ತಿದ್ದು, ಅದರ ಪಾವಿತ್ರ್ಯ ಕಳೆದುಕೊಳ್ಳುತ್ತಿದೆ. ಈಚಿನ ವರ್ಷಗಳಲ್ಲಿ ವಾಣಿಜ್ಯೀಕರಣಗೊಂಡಂತಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಸಂಸತ್‌ನಲ್ಲಿ ಹಾಲಿ ವ್ಯವಸ್ಥೆಯನ್ನು ತುರ್ತಾಗಿ ಬದಲಾಯಿಸಬೇಕಿದೆ. ಇಂದಿನ ಪರಿಸ್ಥಿತಿಗೆ ಹೊಂದುವಂತಹ ಹಾಗೂ ಪ್ರಜಾಪ್ರಭುತ್ವದ ಉದ್ದೇಶ ಈಡೇರುವ ರೀತಿಯಲ್ಲಿ ಮಾರ್ಪಾಡು ಮಾಡಬೇಕಿದೆ~ ಎಂದರು.

`ಜನಲೋಕಪಾಲ್ ಮಸೂದೆ ಜಾರಿಯಿಂದ ಭ್ರಷ್ಟಾಚಾರ ನಿಯಂತ್ರಣವಾಗಲಿದೆ ಎಂಬ ಆಶಯವಿದೆ. ಆದರೆ ರಾಜಕಾರಣಿಯ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿದೆ ಎಂಬ ವಿಶ್ವಾಸವಿಲ್ಲ~ ಎಂದರು.

ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟ್ ಪಿ.ಎ. ನಜರತ್, ಬೆಂಗಳೂರು ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್, ವಿ.ವಿಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಸ್. ಜಯರಾಮು ಉಪಸ್ಥಿತರಿದ್ದರು.

ರಾಮದೇವ್‌ಗೆ ಬೆಂಬಲ
`ಭ್ರಷ್ಟಾಚಾರದ ವಿರುದ್ಧ ಬಾಬಾ ರಾಮದೇವ್ ನಡೆಸುವ ಹೋರಾಟಕ್ಕೆ ನನ್ನ ಬೆಂಬಲವಿದೆ~ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಹೇಳಿದರು.`ನಾವು ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ ರಚನೆಗಾಗಿ ಹೋರಾಟ ನಡೆಸುತ್ತಿದ್ದೇವೆ. ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ. ಇಬ್ಬರ ಉದ್ದೇಶ ಒಂದೇ ಆಗಿರುವುದರಿಂದ ಯಾವುದೇ ತಿಕ್ಕಾಟವಿಲ್ಲ~ ಎಂದರು.

`ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಅಂತಿಮ ವರದಿ ಸಿದ್ಧವಾಗುತ್ತಿದ್ದು, ಜೂನ್ ತಿಂಗಳ ಅಂತ್ಯದೊಳಗೆ ಸಲ್ಲಿಸಲಾಗುವುದು~ ಎಂದು ಸಂತೋಷ್ ಹೆಗ್ಡೆ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT