ರಾಯಚೂರು: ಮತದಾರರ ಹಕ್ಕಿನ ಬಗ್ಗೆ ಅರಿವು ಮೂಡಿಸುವ ದಿಶೆಯಲ್ಲಿ ಚುನಾವಣಾ ಆಯೋಗವು ಮತದಾರರ ದಿನಾಚರಣೆ ಘೋಷಣೆ ಮಾಡಿ ಹೊಸ ಕಹಳೆ ಮೊಳಗಿಸಿದೆ. ಈ ದಿನ ಹೊಸ ಮತದಾರರನ್ನು ಸ್ವಾಗತಿಸುವ ಮಹತ್ವದ ದಿನ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎನ್.ಬಿ ಕುಲಕರ್ಣಿ ಹೇಳಿದರು.
ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಮತದಾರರಿಗೆ ಗುರುತಿನ ಚೀಟಿ ದೊರಕಿಸಲು ಪ್ರಯತ್ನಿಸಲಾಗಿದೆ. ಇನ್ನೂ ಶೇ 14.2ರಷ್ಟು ಮತದಾರರು ಈ ಕಾರ್ಡ್ ಪಡೆಯಬೇಕು. ಗುರುತಿನ ಚೀಟಿ ನಕಲು ತಡೆಯಲು ಅನೇಕ ಸುರಕ್ಷಾ ಮಾರ್ಗ ಅನುಸರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್. ಸುರೇಶ ಮತದಾರರಿಗೆ ಪ್ರಮಾಣವಚನ ಬೋಧಿಸಿದರು. ತಹಸೀಲ್ದಾರ್ ಮಧುಕೇಶ್ವರ ಸ್ವಾಗತಿಸಿದರು. ನಗರಸಭೆ ಆಯುಕ್ತ ತಿಪ್ಪೇಶ ಹಾಗೂ ಮತ್ತಿತರರು ಇದ್ದರು.