ಹಿರಿಯೂರು: ಹೊಸದಾಗಿ ಮತಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಯುವ ಮತದಾರರಿಗೆ ಚುನಾವಣೆ ನೀತಿ-ನಿಯಮಗಳ ಬಗ್ಗೆ ಅರಿವು ಮೂಡಿಸುವಂತೆ ಜಿ.ಪಂ. ಯೋಜನಾ ನಿರ್ದೇಶಕ ಲಕ್ಷ್ಮೀನಾರಾಯಣ್ ಕರೆ ನೀಡಿದರು.
ನಗರದ ಗುರುಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಮತದಾರರ ಜಾಗೃತಿ ಆಂದೋಲನ'ದಲ್ಲಿ ಅವರು ಮಾತನಾಡಿದರು.
ಏ. 7ರವರೆಗೆ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ. ಮತದಾನ ಗೌಪ್ಯವಾಗಿ ನಡೆಯುವ ಕಾರಣದಿಂದ ನಿರ್ಭಯವಾಗಿ ಮತ ಚಲಾಯಿಸಬಹುದು. ಮತದಾನ ಹಕ್ಕು ಎನ್ನುವುದನ್ನು ಯುವಕರಿಗೆ ಮನವರಿಕೆ ಮಾಡಿಕೊಡಬೇಕು. ವೃದ್ಧರು, ಅಂಗವಿಕಲರು ಕೂಡಾ ಮತದಾನದಲ್ಲಿ ಭಾಗವಹಿಸಬಹುದು. ಆಮಿಷಕ್ಕೆ ಬಲಿಯಾಗಬೇಡಿ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ತಿಳಿಸಿದರು.
ಚುನಾವಣೆ ಆಯೋಗದ ಸೂಚನೆಯಂತೆ ಸ್ತ್ರೀಶಕ್ತಿ ಸಂಘ-ಸ್ವಸಹಾಯ ಸಂಘಗಳ ಸದಸ್ಯರಿಗೆ ಗ್ರಾಮಮಟ್ಟದಲ್ಲಿ ಏ. 5ರಿಂದ ಮೇ 2ರವರೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಚುನಾವಣೆ ಸುಸೂತ್ರವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ಲಕ್ಷ್ಮೀನಾರಾಯಣ್ ಮನವಿ ಮಾಡಿದರು.
ಪಿಯು ಉಪ ನಿರ್ದೇಶಕ ಸಿ.ಬಿ. ಶಿವಣ್ಣ, ಬಸವರಾಜ್ ವೈ ಶಿರಹಟ್ಟಿ, ಎಸ್. ಆನಂದರಾಜು, ಜಿ.ಆರ್. ರಮೇಶ್, ಪಿ. ರಾಮಯ್ಯ, ತಿಪ್ಪಯ್ಯ ಹಾಜರಿದ್ದರು.
ಅಂಗನವಾಡಿ ಕಾರ್ಯಕರ್ತೆಯರು ಮತದಾನ ಕುರಿತು ಜಾಗೃತಿ ಜಾಥಾ ನಡೆಸಿದರು.