ಶಿವಮೊಗ್ಗ: ನಗರದ ಮತದಾರರು ಬದಲಾವಣೆ ಬಯಸುತ್ತಿದ್ದು, ಈ ಬಾರಿ ಜೆಡಿಎಸ್ಗೆ ಆಶೀರ್ವಾದ ಮಾಡುತ್ತಾರೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ. ಶ್ರೀಕಾಂತ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ದುರಾಳಿತಡದಿಂದ ಜನ ಬೇಸತ್ತಿದ್ದಾರೆ. ನಗರಸಭೆ ಚುನಾವಣೆಯಲ್ಲಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲೂ ಇದೇ ಬಗೆಯ ಫಲಿತಾಂಶ ನೀಡುತ್ತಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಂಟು ವರ್ಷಗಳಿಂದ ಕ್ಷೇತ್ರದಲ್ಲಿ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದು, ಮತದಾರರು ತಮಗೆ ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ ಇದೆ. ಈ ಹಿಂದೆ ಕಾಂಗ್ರೆಸ್, ಜೆಡಿಎಸ್ಗೆ ಅವಕಾಶ ನೀಡಲಾಗಿದೆ. ಒಮ್ಮೆ ಜೆಡಿಎಸ್ಗೂ ಅವಕಾಶ ನೀಡಬೇಕೆಂಬ ಮನಸ್ಸು ಜನರಲ್ಲಿದೆ ಎಂದು ಹೇಳಿದರು.
ಬಿಜೆಪಿಯವರು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಹೇಳುತ್ತಾರೆ; ಆದರೆ, ಟಿಪ್ಪು ನಗರದಲ್ಲಿ ಕುಡಿಯುವ ನೀರನ್ನು ಸೋಸಿ ಬಳಸಬೇಕಾಗಿದೆ. ಬೆರಳಣಿಕೆಯ ಹಕ್ಕುಪತ್ರ ಹಂಚಿಕೆ ಮಾಡಿ, ದೊಡ್ಡ ಪ್ರಚಾರ ತೆಗೆದುಕೊಂಡ ಬಿಜೆಪಿ, ಬಹಳಷ್ಟು ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು.
ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡಿದ್ದು, ಶಿವಮೊಗ್ಗ ನಗರದಲ್ಲಿ ಐದು ಸ್ಥಾನ ಪಡೆದು, ಶೇಕಡ 26 ಮತ ಪಡೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಇದು ಇನ್ನಷ್ಟು ಶಕ್ತಿ ಹೊಂದಿ ಗೆಲುವಿಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಹಾಪೋಹ: ನಾಮಪತ್ರ ಸಲ್ಲಿಕೆಯ ಹಿಂದಿನ ದಿನದವರೆಗೂ ತಮ್ಮ ಸ್ಪರ್ಧೆ ಕುರಿತಂತೆ ವಿರೋಧ ಪಕ್ಷಗಳು ಉಹಾಪೋಹ ಬಿತ್ತಿದವು. ಮತದಾರರಲ್ಲಿ ಗೊಂದಲ ಸೃಷ್ಟಿಸುವುದರಲ್ಲಿ ನಿರತರಾದವು. ಆದರೆ, ಮತದಾರರು ಇವುಗಳಿಗೆ ಕಿವಿಗೊಡದೆ ಜೆಡಿಎಸ್ ಬೆಂಬಲಿಸಬೇಕು. ಮುಂದಿನ ದಿನಗಳಲ್ಲಿ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವುದರ ಜತೆಗೆ ಅವರ ನೆರಳಾಗಿ ಇರಲು ಬಯಸುವುದಾಗಿ ಶ್ರೀಕಾಂತ್ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಎಸ್ಆರ್ ಕಾಂಗ್ರೆಸ್ ಹಾಗೂ ಕೆಜೆಪಿ ಪದಾಧಿಕಾರಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ, ಮುಖಂಡರಾದ ರಾಮಕೃಷ್ಣ, ಪವಿತ್ರಾ ರಾಮಯ್ಯ, ಜಿ.ಡಿ. ಮಂಜುನಾಥ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.