ಮಂಡ್ಯ: ಮತದಾರರನ್ನು ನೇರವಾಗಿ ಭೇಟಿಯಾಗಿ ಕುಂದುಕೊರತೆ ಆಲಿಸುವ ಉದ್ದೇಶದ `ಮತದಾರರೊಂದಿಗೆ ಮುಖಾಮುಖಿ~ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಭಾನುವಾರ ಚಾಲನೆ ನೀಡಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಆತ್ಮಾನಂದ, `ಕಾಂಗ್ರೆಸ್ ಪಕ್ಷಕ್ಕೆ ಗಾಂಧೀಜಿ ಮತ್ತು ಲಾಲ್ಬಹದ್ದೂರು ಶಾಸ್ತ್ರಿ ಅವರು ಹಾಕಿಕೊಟ್ಟಿರುವ ಮಾರ್ಗ ದಾರಿದೀಪ~ ಎಂದರು.
ಪಕ್ಷದ ರಾಜ್ಯ ಘಟಕದ ಸೂಚನೆಯಂತೆ ಈಗ ಮತದಾರರೊಂದಿಗೆ ಮುಖಾಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಅವರ ನೋವಿಗೆ ಸ್ಪಂದಿಸಬೇಕು ಎಂದರು.
ಈ ಕಾರ್ಯಕ್ರಮ ಮುಂದಿನ ನೂರು ದಿನ ನಡೆಯಲಿದ್ದು, ಬೂತ್ ಮಟ್ಟದಲ್ಲಿ ಇದನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಯತ್ನಿಸಬೇಕು. ಇದೇ ಅವಧಿಯಲ್ಲಿ ಕೇಂದ್ರದಲ್ಲಿ ಪಕ್ಷದ ಸಾಧನೆಗಳನ್ನು ಕುರಿತು ತಿಳಿಸಬೇಕು ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 150 ಮತದಾರರ ಅನಿಸಿಕೆಗಳನ್ನು ಆಲಿಸಲಾಯಿತು. ವಿವಿಧ ಘಟಕಗಳ ಅಧ್ಯಕ್ಷರಾದ ಜಬೀವುಲ್ಲಾ, ಜಿ.ಸಿ.ಆನಂದ್, ಶುಭದಾಯಿನಿ, ಯುವ ಕಾಂಗ್ರೆಸ್ನ ಸತ್ಯಾನಂದ, ಮುನಾವರ್ಖಾನ್, ಮಹಲಿಂಗು, ಲಲಿತಾ ಭಾಸ್ಕರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಿತ್ರ ರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ನಾಗಮಣಿ, ವಿಜಯಲಕ್ಷ್ಮಿ ರಘುನಂದನ್, ಸದಸ್ಯರಾದ ಬೋರೇಗೌಡ, ಲೋಕೇಶ್ ಇದ್ದರು.