ದಾವಣಗೆರೆ: `ವಿದೇಶಿ ಮಹಿಳೆ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ (ನ್ಯಾಕ್) ಸಮಿತಿ ರಚಿಸಿರುವ `ಮತೀಯ ಹಿಂಸಾಚಾರ ತಡೆ ಕಾಯ್ದೆ-2011~ರ ವಿರುದ್ಧ ಮಹಿಳೆಯರು ಸಂಘಟಿತರಾಗಿ ಹೋರಾಡಬೇಕು~ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ವಿಕ್ಟೋರಿಯಾ ಗೌರಿ ಕರೆ ನೀಡಿದರು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
`ಭಾರತದ ಸಂಸ್ಕೃತಿಯ ಗಂಧ-ಗಾಳಿ ಇಲ್ಲದ, ಇಟಲಿಯ ಸೋನಿಯಾ ಗಾಂಧಿ ನೇತೃತ್ವದ ಸಮಿತಿ ಕೋಮು ಗಲಭೆ ತಡೆಗಟ್ಟಲು `ಮತೀಯ ಹಿಂಸಾಚಾರ ತಡೆ ಕಾಯ್ದೆ~ ರಚಿಸಿದೆ.
ಇದನ್ನು ದೇಶದ ಆರು ರಾಜ್ಯದ ಮುಖ್ಯಮಂತ್ರಿಗಳು ವಿರೋಧಿಸಿದ್ದಾರೆ. ಈ ಕಾಯ್ದೆಯೇನಾದರೂ ಜಾರಿಗೆ ಬಂದಲ್ಲಿ ಇಡೀ ದೇಶವೇ ಇಬ್ಭಾಗವಾಗುವ ಸಾಧ್ಯತೆ ಇದೆ~ ಎಂದು ಅವರು ಪ್ರತಿಪಾದಿಸಿದರು. ಸಚಿವ ಎಸ್.ಎ. ರವೀಂದ್ರನಾಥ್ ಉದ್ಘಾಟಿಸಿದರು. ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆ ಪೂರ್ಣಿಮಾ ಪ್ರಕಾಶ್, ಸದಸ್ಯೆ ಮಧುಶ್ರೀ, ರಾಜ್ಯ ಘಟಕದ ಅಧ್ಯಕ್ಷೆ ರೀನಾ ಪ್ರಕಾಶ್ ಹಾಜರಿದ್ದರು.