ಹನುಮಸಾಗರ: ಕಳೆದ ನಾಲ್ಕಾರು ವರ್ಷಗಳಿಂದ ಸರಿಯಾದ ಪ್ರಮಾಣದಲ್ಲಿ ಮಳೆಯಾಗದಿರುವ ಕಾರಣವಾಗಿ ದೇಶೀಯ ಬೀಜದ ತಳಿಯಾಗಿರುವ ಹಬ್ಬುಶೇಂಗಾ ಬೆಳೆ ಕ್ಷೀಣಿಸುತ್ತಾ ಬಂದಿತ್ತು, ಇನ್ನೇನು ದೇಶೀಯ ಬೀಜದ ತಳಿಯೊಂದು ರೈತರ ಬೀಜದ ಥೈಲಿಯಿಂದ ಮರೆಯಾಗುತ್ತದೆ ಎಂಬ ಹಂತದಲ್ಲಿರುವಾಗ ಈ ಬಾರಿ ಸುರಿದ ಮಳೆಗೆ ಅಲ್ಲಲ್ಲಿ ರೈತರು ಹಬ್ಬುಶೇಂಗಾ ಬೆಳೆದು ರಾಶಿ ಮಾಡುತ್ತಿರುವುದು ಸದ್ಯ ಕಂಡು ಬರುತ್ತಿದೆ.
ಬಹುತೇಕವಾಗಿ ಜಾನುವಾರುಗಳ ಹೊಟ್ಟಿಗಾಗಿಯೇ ಬೆಳೆಯಲಾಗುತ್ತಿದ್ದ ಹಬ್ಬುಶೇಂಗಾವನ್ನು ಮಳೆಯಾಗುವುದಿಲ್ಲ, ಮಾರುಕಟ್ಟೆಯಲ್ಲಿ ಹಬ್ಬು ಶೇಂಗಾ ಬೆಳೆಗೆ ಉತ್ತಮ ಬೆಲೆ ಇಲ್ಲ ಎಂಬ ಕಾರಣದಿಂದ ಅನೇಕ ರೈತರು ಈಗಾಗಲೇ ಈ ಬೆಳೆಗೆ ವಿದಾಯ ಹೇಳಿದ್ದಾರೆ.
‘ದನದ ಮೂತಿ ನೋಡಿದ್ರ ಹಬ್ಬುಶೇಂಗಾ ಹಾಕಬೇಕನಸ್ತೈತಿ, ಆದ್ರ ಮಳಿಯಪ್ಪನ ದಾರಿ. ಪ್ಯಾಟ್ಯಾಗಿನ ಧಾರಣಿ ನೋಡಿದ್ರ ಹಬ್ಬು ಶೇಂಗಾ ಬಿತ್ತಬಾರ್ದು ನೋಡ್ರಿ’ ಎಂದು ಹಬ್ಬುಶೇಂಗಾ ರಾಶಿಯಲ್ಲಿ ತೊಡಗಿದ್ದ ಮಡಿಕ್ಕೇರಿ ಗ್ರಾಮದ ಬಸಲಿಂಗಪ್ಪ ಹೇಳುತ್ತಾರೆ.
ಈ ಭಾಗದ ಬಿಸಿ ವಾತಾವರಣ, ಮಣ್ಣು ಹಾಗೂ ನೈಸರ್ಗಿಕ ಅನುಕೂಲಗಳು ಈ ಒಣಬೇಸಾಯ ಹಬ್ಬು ಶೇಂಗಾ ಬೆಳೆಗೆ ವರದಾನವಾಗಿವೆ. ಕಳೆದ ನಾಲ್ಕಾರು ವರ್ಷಗಳಿಂದ ಹಬ್ಬುಶೇಂಗಾ ಬೆಳೆಗೆ ಸಮರ್ಪಕ ಮಳೆಯಾಗದಿರುವುದರಿಂದಾಗಿ ವರ್ಷದಿಂದ ವರ್ಷಕ್ಕೆ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿದೆ.
ಉತ್ತಮ ಎನ್ನುವಂತಹ ನಾಲ್ಕಾರು ಮಳೆಯಾದರೆ ನೆಲದ ತುಂಬೆಲ್ಲಾ ಹಬ್ಬಿ ಉತ್ತಮ ಇಳುವರಿ ತರುತ್ತದೆ. ಇಳುವರಿ ಬರುವುದು ಒಂದೆಡೆಯಾದರೆ ಈ ಬಳ್ಳಿಯಿಂದ ದೊರಕುವ ಹೊಟ್ಟು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವುದರಿಂದ ಜಾನುವಾರುಗಳಿಗೆ ಉತ್ತಮ ಆಹಾರವಾಗಿರುತ್ತದೆ. ಗೆಜ್ಜೆಶೇಂಗಾ ಹೆಚ್ಚು ಎಣ್ಣೆ ಅಂಶ ಹೊಂದಿ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದರೆ ಹಬ್ಬುಶೇಂಗಾದಲ್ಲಿ ಎಣ್ಣೆಯ ಪ್ರಮಾಣ ಕಡಿಮೆ ಇರುವುದರಿಂದಾಗಿಯೇ ಖರೀದಿದಾರರು ಗೆಜ್ಜೆ ಶೇಂಗಾ ಕೊಳ್ಳಲು ತೋರುವಷ್ಟು ಒಲವು ಹಬ್ಬುಶೇಂಗಾಕ್ಕೆ ತೋರುವುದಿಲ್ಲ.
ಜೂಜಾಟದಂತಿರುವ ಮಳೆಗಾಲ, ಏರುತ್ತಿರುವ ರಸಗೊಬ್ಬರದ ಬೆಲೆ, ಇಳಿಯುತ್ತಿರುವ ಹಬ್ಬು ಶೇಂಗಾದ ಬೆಲೆ, ಕೂಲಿ ಆಳಿನ ಸಮಸ್ಯೆ ಈ ಎಲ್ಲಾ ಕಾರಣಗಳಿಂದಾಗಿ ರೈತ ಹಬ್ಬುಶೇಂಗಾದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.
‘ಕಳೆದ ಹತ್ತಾರು ವರ್ಷಗಳಿಂದ ಬಿತ್ತನೆ ಪ್ರಮಾಣ ಸಂಪೂರ್ಣ ಕಡಿಮೆಯಾಗಿರುವುದರಿಂದ ದನಗಳ ಕೊಟ್ಟಿಗೆಯಲ್ಲಿ ಈ ಹೊಟ್ಟು ಇಲ್ಲದಂತಾಗಿದೆ. ನಾವು ಹಬ್ಬುಶೇಂಗಾ ಬಿತ್ತೂದು ರೊಕ್ಕಕ್ಕಲ್ರಿ. ದನದ ಹೊಟ್ಟೆಗೆ, ಗೆಜ್ಜೆಶೇಂಗಾದ ಹೊಟ್ಟು ಮಳೆಗೆ ತೊಯ್ದರೆ ಕೊಳಿತೈತಿ. ಆದ್ರ ಹಬ್ಬುಶೇಂಗಾದ ಹೊಟ್ಟು ತೊಯ್ದರೂ ನಂತರ ಗರಿ ಗರಿಯಾಗಿ ಜಾನುವಾರುಗಳ ಬಾಯಿಗೆ ರುಚಿ ಕೊಡುತೈತಿ’ ಎನ್ನುವ ಬಸವರಾಜ ನಾಲ್ಕು ಎಕರೆಯಲ್ಲಿ ಹಬ್ಬುಶೇಂಗಾ ಹಾಕಿ ಈ ಬಾರಿ ಉತ್ತಮ ಫಸಲು ಪಡೆದುಕೊಂಡಿದ್ದಾರೆ.
‘ಇದರ ಬೇರು, ಬಳ್ಳಿಯಲ್ಲಿ ಸಾಕಷ್ಟು ರೈಜೋಬಿಯಂ ಅಣುಜೀವಿಗಳು ಇರುವುದರಿಂದ ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಪ್ರಮಾಣ ಸಂಗ್ರಹವಾಗುತ್ತದೆ. ಅಲ್ಲದೆ ಹಬ್ಬುಶೇಂಗಾ ಬಳ್ಳಿ ಹರಗಿದ ನಂತರ ಮಣ್ಣಿನಲ್ಲಿ ಮುಚ್ಚಿ ಹೋದ ಶೇಂಗಾ ಹೆಕ್ಕಲು ಮೇಲಿಂದ ಮೇಲೆ ನೇಗಿಲು, ಕುಂಟೆ ಹೊಡೆಯುವುದು, ಕೈಯಿಂದ ಕೆದರುವುದರಿಂದ ಮಣ್ಣು ಹಸನಗೊಳ್ಳುವುದರ ಜೊತೆಗೆ ಮಣ್ಣಿಗೆ ಬಿಸಲು ತಾಗಿ ಮಣ್ಣಿನಲ್ಲಿರುವ ರೋಗಾಣುಗಳು ನಾಶಹೊಂದುತ್ತವೆ. ಇಂತಹ ಜಮೀನಿನಲ್ಲ ಬಿತ್ತುವ ಮುಂದಿನ ಯಾವುದೇ ಬೆಳೆ ಹುಲುಸಾಗಿ ಬೆಳೆದು ರೈತನ ಒಡಲು ತುಂಬುತ್ತದೆ’ ಎಂದು ಅನುಭವಿ ರೈತರು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.