ಬೆಂಗಳೂರು: ಪೋಷಕರ ಸಂಘಟಿತ ಹೋರಾಟದ ಹಿನ್ನೆಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ ವೈ.ಎನ್.ಶ್ರವಣ ಗೌಡ ಎಂಬಾತನಿಗೆ ಮಧ್ಯವಾರ್ಷಿಕ ಪರೀಕ್ಷೆ ಬರೆಯಲು ಬಸವೇಶ್ವರನಗರದ ವಿ.ಎಲ್.ಎಸ್.ಇಂಟರ್ನ್ಯಾಷನಲ್ ಶಾಲೆ ಕೊನೆಗೂ ಅನುವು ಮಾಡಿಕೊಟ್ಟಿದೆ.
ಹೆಚ್ಚುವರಿ ಶುಲ್ಕ ಪಾವತಿಸಿಲ್ಲ ಎಂಬ ನೆಪ ಒಡ್ಡಿ ಶಾಲೆಯಿಂದ ಶ್ರವಣ್ ಗೌಡನನ್ನು ಆರನೇ ತರಗತಿಯಿಂದ ಹೊರ ಹಾಕಲಾಗಿತ್ತು. ಈ ಸಂಬಂಧ ಪೋಷಕ ವೈ.ಆರ್.ನಾಗರಾಜ್ ಅವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ‘ಕಳೆದ ವರ್ಷ ವಾರ್ಷಿಕ ಶುಲ್ಕ ರೂ.19,000 ಇತ್ತು. ಈ ಸಲ ಏಕಾಏಕಿ ರೂ.32,500ಕ್ಕೆ ಏರಿಸಲಾಗಿತ್ತು. ಹೆಚ್ಚುವರಿ ಪ್ರವೇಶ ನೀಡಲು ನಿರಾಕರಿಸಿದ್ದ ಕಾರಣ ತರಗತಿಯಿಂದ ಹೊರಕ್ಕೆ ಹಾಕಲಾಗಿತ್ತು’ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ನಗರದಲ್ಲಿ ಇತ್ತೀಚೆಗೆ ಆಯೋಗ ಏರ್ಪಡಿಸಿದ್ದ ಸಾರ್ವಜನಿಕ ಆಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ತೀರ್ಪುಗಾರರು ವಿದ್ಯಾರ್ಥಿಗೆ ಪ್ರವೇಶ ನೀಡುವಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿದ್ದರು. ಇದಾದ ಬಳಿಕವೂ ಶಾಲಾ ಆಡಳಿತ ಮಂಡಳಿ ತರಗತಿಗೆ ಸೇರಿಸಿಕೊಳ್ಳಲು ಒಪ್ಪಿರಲಿಲ್ಲ. ಪೋಷಕರು ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು. ಈ ನಡುವೆ, ವಿದ್ಯಾರ್ಥಿಗಳ ಪೋಷಕರು ಸಂಘಟಿತರಾಗಿ ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿದ್ದರು. ‘ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಇದ್ದಲ್ಲಿ ಶಾಲಾ ಮಾನ್ಯತೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಬೆಂಗಳೂರು ಉತ್ತರ) ಇದೇ 18ರಂದು ನೋಟಿಸ್ ನೀಡಿದ್ದರು.
ಶುಕ್ರವಾರ ಮಧ್ಯವಾರ್ಷಿಕ ಪರೀಕ್ಷೆ ಆರಂಭವಾಗಿತ್ತು. ಶ್ರವಣ್ಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ. ಪುನಃ ಕೆಲವು ಪೋಷಕರು ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಪೋಷಕರೊಂದಿಗೆ ಸಮಾಲೋಚಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ.
‘ಶಾಲಾ ಆಡಳಿತ ಮಂಡಳಿಯವರು ಶನಿವಾರ ಪರೀಕ್ಷೆ ನಡೆಸುವುದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಸಮಸ್ಯೆ ಪರಿಹಾರ ಆಗಿದೆ’ ಎಂದು ಪೋಷಕ ನಾಗರಾಜ್ ಅವರು ತಿಳಿಸಿದರು.
‘ಆಡಳಿತ ಮಂಡಳಿ ಈ ಸಲ ಏಕಾಏಕಿ ಶೇ 40 ಶುಲ್ಕ ಹೆಚ್ಚಿಸಿದೆ. ಈ ವರ್ಷ ಶುಲ್ಕವನ್ನು ರೂ.32,500 ಕ್ಕೆ ಹೆಚ್ಚಿಸಲಾಗಿದೆ. ಪುಸ್ತಕಕ್ಕೆ ರೂ.4,500 ಹಾಗೂ ಸಮವಸ್ತ್ರಕ್ಕೆ ರೂ.2,000 ಪ್ರತ್ಯೇಕವಾಗಿ ಪಾವತಿಸಬೇಕಿದೆ. ಅಭಿವೃದ್ಧಿ ಶುಲ್ಕ ರೂಪದಲ್ಲಿ ರೂ.10,000 ವಸೂಲಿ ಮಾಡಲಾಗುತ್ತಿದೆ. ಕ್ರೀಡಾಕೂಟ ಶುಲ್ಕವಾಗಿ ರೂ.800 ಪಡೆಯಲಾಗಿದೆ. ಆದರೆ, ಕ್ರೀಡಾಕೂಟವನ್ನು ಸರ್ಕಾರಿ ಮೈದಾನದಲ್ಲಿ ನಡೆಸಲಾಗಿದೆ’ ಎಂದು ಪೋಷಕರಾದ ಸುಮಾ ದೂರಿದರು.
‘ಪೋಷಕರು ಹೆಚ್ಚುವರಿ ಶುಲ್ಕ ಪಾವತಿಸಲು ನಿರಾಕರಿಸಿದ್ದರು. ಇದಕ್ಕೆ ಪ್ರತಿಯಾಗಿ ಆಡಳಿತ ಮಂಡಳಿ ಕೆಲವು ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಡಲಿಲ್ಲ. ಶಾಲಾ ಪ್ರವಾಸಕ್ಕೂ ಕರೆದುಕೊಂಡಿಲ್ಲ. ವಿದ್ಯಾರ್ಥಿಗಳ ಸುಲಿಗೆ ಮಾಡಲಾಗುತ್ತಿದೆ. ಬೆದರಿಕೆ ತಂತ್ರಕ್ಕೆ ಹೆದರಿ ಕೆಲವು ಪೋಷಕರು ಹೆಚ್ಚುವರಿ ಶುಲ್ಕ ಪಾವತಿಸಿದ್ದಾರೆ’ ಎಂದು ಅವರು ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.