ಚನ್ನಪಟ್ಟಣ: ತಾಲ್ಲೂಕಿನಲ್ಲಿ ಮತ್ತೆ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಬಂದಿದ್ದು, ಗುರುವಾರವೂ ನೂರಾರು ರೈತರು ಇಲ್ಲಿನ ಹಾಪ್ಕಾಮ್ಸ ರಸಗೊಬ್ಬರ ಮಳಿಗೆ ಎದುರು ಸಾಲುಗಟ್ಟಿ ನಿಂತು ಯೂರಿಯಾ ಪಡೆದುಕೊಂಡರು.
ಹಾಪ್ಕಾಮ್ಸನಲ್ಲಿ 44 ಟನ್ಗಳಿಗೂ ಹೆಚ್ಚು ರಸಗೊಬ್ಬರ ವಿತರಣೆಯಾಯಿತು. ಬ್ರಹ್ಮಣೀಪುರ ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ವಿನಾಯಕ ರಸಗೊಬ್ಬರ ಮಾರಾಟ ಕೇಂದ್ರದಲ್ಲಿಯೂ ಯೂರಿಯಾ ವಿತರಿಸಲಾಯಿತು.
ಈ ಮೂರು ಕೇಂದ್ರಗಳಿಂದ ಒಟ್ಟು 76 ಟನ್ಗಳಷ್ಟು ರಸಗೊಬ್ಬರವನ್ನು ಒಂದೇ ದಿನ ವಿತರಿಸಲಾಯಿತು. ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಬಿದ್ದ ಅಲ್ಪಸ್ವಲ್ಪ ಮಳೆಯಿಂದಾಗಿ ಯೂರಿಯಾ ರಸಗೊಬ್ಬರಕ್ಕೆ ದಿಢೀರ್ ಬೇಡಿಕೆ ಕಂಡುಬಂದಿದೆ.
ಕೆಲವು ದಿನಗಳ ಹಿಂದೆಯೂ ಇದೇ ರೀತಿ ಯೂರಿಯಾಗೆ ಅಭಾವ ಸೃಷ್ಟಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ಸಮಯದಲ್ಲಿ ನೂಕನುಗ್ಗಲು ಏರ್ಪಟ್ಟಿದ್ದರಿಂದ ಪೊಲೀಸರ ಸಹಾಯದೊಂದಿಗೆ ಯೂರಿಯಾ ವಿತರಿಸಿಲಾಗಿತ್ತು.
ಇಂದು ಸಹ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವಾಣಿ ಉಪಸ್ಥಿತಿಯಲ್ಲಿ ಕೃಷಿ ಇಲಾಖೆಯ ಚನ್ನಂಕೇಗೌಡ ಹಾಗೂ ಪೊಲೀಸ್ ಸಿಬ್ಬಂದಿ ನೆರವಿನೊಂದಿಗೆ ಇಡೀ ದಿನ ರೈತರಿಗೆ ಯೂರಿಯಾ ರಸಗೊಬ್ಬರವನ್ನು ವಿತರಿಸಲಾಯಿತು.