ಕಡೂರು: ತಾಲ್ಲೂಕಿನ ಜೀವನಾಡಿ ಮದಗದ ಕೆರೆ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರವ್ಯಾಪ್ತಿಯಲ್ಲಿ ಒಂದು ಕೆರೆಯನ್ನು ವಿಹಾರತಾಣವಾಗಿ ರೂಪಿಸುವ ಬಗ್ಗೆ ಗಮನ ಹರಿಸುವುದಾಗಿ ಸರಸ್ವತಿಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಬಿ.ಪಿ.ನಾಗರಾಜ್ ತಿಳಿಸಿದರು.
ಎಮ್ಮೆದೊಡ್ಡಿ ಸಮೀಪದ ಮದಗದಕೆರೆ ತುಂಬಿ ಕೋಡಿ ಬಿದ್ದ ಪ್ರಯುಕ್ತ ಪತ್ನಿಯ ಜೊತೆಗೂಡಿ ಬುಧವಾರ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ವರುಣನ ಕೃಪೆಯಿಂದ ಬರದ ಛಾಯೆಯಲ್ಲಿದ್ದ ತಾಲ್ಲೂಕಿನ ರೈತರ ಮೊಗದಲ್ಲಿ ನಗು ಮೂಡಿದ್ದು ಮದಗದಕೆರೆಯಿಂದ ಸುತ್ತಮುತ್ತಲ ಹತ್ತಾರು ಕೆರೆಗಳು ಭರ್ತಿಯಾಗಲಿವೆ. ಇದರಿಂದ ಅಂತರ್ಜಲ ಹೆಚ್ಚಳವಾಗಿ ತಾಲ್ಲೂಕಿನ ನೂರಾರು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯಲಿದ್ದು ಜನಪ್ರತಿನಿಧಿಗಳ ಮೇಲಿನ ಅರ್ಧ ಹೊರೆ ಕಡಿಮೆ ಆಗಲಿದೆ ಎಂಬ ಆಶಯ ವ್ಯಕ್ತಪಡಿಸಿದ ಅವರು ಮದಗದಕೆರೆಯಿಂದ ಹೊರ ಬರುವ ನೀರು ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಹರಿಯುತ್ತದೆ.
ಬ್ರಹ್ಮದೇವರ ಕಟ್ಟೆಯ ಬಳಿ ಓವರ್ಬ್ರಿಡ್ಜ್ ನಿರ್ಮಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸುವ ಮತ್ತು ಬಿಳಚೇನಹಳ್ಳಿ ಕೋಟೆ ಪ್ರದೇಶದ ಸಂಪರ್ಕವೇ ಕೆರೆಗೆ ನೀರು ಹರಿದುಬರುವ ಸಂದರ್ಭದಲ್ಲಿ ಕಡಿತಗೊಳ್ಳುತ್ತಿದ್ದು ಅಲ್ಲಿಯೂ ಮೇಲು ರಸ್ತೆ ನಿರ್ಮಿಸಲು ತಾವು ಶ್ರಮಿಸುವುದಾಗಿಯೂ, ಸುಮಾರು ಒಂದೂವರೆಯಿಂದ ಎರಡು ಕೋಟಿ ರೂಗಳ ವೆಚ್ಚದ ಈ ಯೋಜನೆ ಬಗ್ಗೆ ಶಾಸಕರ ಗಮನ ಸೆಳೆದು ಶೀಘ್ರ ಈ ವ್ಯವಸ್ಥೆ ಮಾಡಲು ಯತ್ನಿಸುವುದಾಗಿಯೂ ತಿಳಿಸಿದರು.
ಮುಖ್ಯಮಂತ್ರಿಗಳ ಪ್ರದೇಶಾಭಿವೃದ್ಧಿ ನಿಧಿ ಅಡಿ ಮದಗದಕೆರೆ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸುವ ಬಗ್ಗೆ ಶಾಸಕರ ಗಮನಕ್ಕೆ ತಂದು ಅಭಿವೃದ್ಧಿಗೆ ಯತ್ನಿಸುವುದಾಗಿ ತಿಳಿಸಿದ ಅವರು ವರುಣನ ಕೃಪೆ ಮುಂದೆಯೂ ಹೀಗೇ ಇರಲಿ ರೈತರ ಬಾಳಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಮಮತಾ, ಕವಿತಾ, ಅನುಷಾ, ರಮೇಶ್, ವಸಂತ, ಹರಿಪ್ರಸಾದ್, ಚಿಕ್ಕೇನಹಳ್ಳಿ ಹಾಲಪ್ಪ, ಎಂ.ಕೆ.ಗಂಗಾಧರ, ಮಲ್ಲಪ್ಪ, ಭಾರತಿ, ಸುಧಾ ಕಾಂತ, ನೇತ್ರಮ್ಮ, ಮುಕುಂದ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.