ಮದುರೆ: ಇಲ್ಲಿನ ಕರ್ನಾಟಕ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಇಲ್ಲಿನ `ಸೇತುಪತಿ' ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಯ ಉದ್ಘಾಟನೆಯನ್ನು ಸಂಘದ ಅಧ್ಯಕ್ಷ ಡಾ. ಮೋಹನ್ ನೆರವೇರಿಸಿದರು. ಮಧ್ಯಾಹ್ನ ರಂಗೋಲಿ, ಚಿತ್ರಕಲೆ, ಛದ್ಮವೇಶ, ಭಾವಗೀತೆ ಸ್ಪರ್ಧೆ ನಡೆಸಲಾಯಿತು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿದ `ಇರ್ಕಾನ್' ಪ್ರಧಾನ ವ್ಯವಸ್ಥಾಪಕ ಎಚ್.ಡಿ.ದೊಡ್ಡಯ್ಯ, ಹೊರನಾಡ ಕನ್ನಡಿಗರು ರಾಜ್ಯೋತ್ಸವ ಆಚರಿಸುವ ಅವಶ್ಯಕತೆ ವಿವರಿಸಿದರು. ಸಂಘದ ಯೋಜಿತ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಎಲ್ಲರ ನೆರವು ಅಗತ್ಯ ಎಂದರು.
ಡಾ. ಮೋಹನ್ ಅವರು ಕನ್ನಡ-ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ನೆರವಿಲ್ಲದೆ ಸಂಘದ ಕಟ್ಟಡ ನಿರ್ಮಾಣ ಕೆಲಸ ಪೂರ್ಣಗೊಳಿಸುವುದು ಅಸಾಧ್ಯ ಎಂದರು. ಖಜಾಂಚಿ ಕಲ್ಮಡ್ಕ ಕೃಷ್ಣ ಉಪಸ್ಥಿ ತರಿದ್ದರು.