ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಒಲ್ಲದ ಪದವೀಧರೆ ಆತ್ಮಹತ್ಯೆ

Last Updated 4 ಜುಲೈ 2013, 19:48 IST
ಅಕ್ಷರ ಗಾತ್ರ

ಬೆಂಗಳೂರು: ಭಾರತಿ (23) ಎಂಬ ಎಂಜಿನಿಯರಿಂಗ್ ಪದವೀಧರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರಾ ಲೇಔಟ್‌ನಲ್ಲಿ ಗುರುವಾರ ನಡೆದಿದೆ.

ಚಂದ್ರಾಲೇಔಟ್‌ನ ನಂಜರಸಪ್ಪ ಲೇಔಟ್‌ನ ಗೋಪಾಲರೆಡ್ಡಿ ಮತ್ತು ಪರಿಮಳ ಅವರ ಪುತ್ರಿ ಭಾರತಿ, ಮನೆಯ ಎರಡನೇ ಮಹಡಿಯ ತಮ್ಮ ಕೋಣೆಯಲ್ಲಿ ವಿಷ (ಮೆಟಾಸೈಡ್ ಕೀಟ ನಾಶಕ) ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಬೆಳಿಗ್ಗೆ ಗೋಪಾಲರೆಡ್ಡಿ, ಭಾರತಿ ಅವರ ಕೋಣೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಇತ್ತೀಚೆಗೆ ಬಿ.ಇ ವ್ಯಾಸಂಗ ಮುಗಿಸಿದ್ದ ಭಾರತಿ ಅವರಿಗೆ, ಪರಿಮಳ ಅವರ ತಮ್ಮ ಹರಿ ಎಂಬುವರನ್ನು ಮದುವೆ ಮಾಡಲು ಮನೆಯವರು ನಿರ್ಧರಿಸಿದ್ದರು. ಆದರೆ, ಈ ಮದುವೆ ಇಷ್ಟವಿಲ್ಲದ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. `ಸದ್ಯ ನನಗೆ ಮದುವೆಯಾಗಲು ಇಷ್ಟವಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ' ಎಂದು ಅವರು ತಮ್ಮ ಮೊಬೈಲ್‌ನಲ್ಲಿ ವಾಯ್ಸ ರೆಕಾರ್ಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

`ಅಕ್ಕ ಎಂಜಿನಿಯರಿಂಗ್ ಪದವಿಯಲ್ಲಿ ಉತ್ತಮ ಅಂಕ ಪಡೆದಿದ್ದಳು. ಎಂಜಿನಿಯರ್ ಆಗಿ ಒಳ್ಳೆಯ ಹೆಸರು ಮಾಡಬೇಕು ಎಂದು ಕನಸು ಕಂಡಿದ್ದಳು. ಈಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಅತೀವ ನೋವು ತಂದಿದೆ. ಮದುವೆಯಾಗಲು ಇಷ್ಟವಿಲ್ಲದಿದ್ದರೆ ಅದನ್ನು ಹೇಳಬಹುದಿತ್ತು. ಆದರೆ, ಆಕೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ' ಎಂದು ಭಾರತಿ ಅವರ ತಮ್ಮ ಮಂಜುನಾಥ್ ಕಣ್ಣೀರಿಟ್ಟರು.

`ಮನೆಯಲ್ಲಿ ಆಕೆಯ ಮದುವೆ ಮಾತುಕತೆ ನಡೆಯುತ್ತಿತ್ತೇ ಹೊರತು ಬಲವಂತವಾಗಿ ಮದುವೆ ಮಾಡಲು ಮುಂದಾಗಿರಲಿಲ್ಲ. ಮದುವೆ ಇಷ್ಟವಿಲ್ಲ ಎಂದು ಆಕೆ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಅಲ್ಲದೇ ಆಕೆ ಬೇರೆ ಯಾರನ್ನೂ ಪ್ರೀತಿಸುತ್ತಲೂ ಇರಲಿಲ್ಲ' ಎಂದು ಅವರು ತಿಳಿಸಿದರು.

`ಭಾರತಿ ಯಾರೊಂದಿಗೂ ಒರಟಾಗಿ ಮಾತನಾಡುತ್ತಿರಲಿಲ್ಲ. ಪ್ರತಿಭಾವಂತೆಯಾದ ಆಕೆ ಚಿಕ್ಕಂದಿನಿಂದಲೂ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಳು. ಆಕೆಗೆ ಸಾವಿನಿಂದ ಆಘಾತವಾಗಿದೆ' ಎಂದು ಸ್ಥಳೀಯರಾದ ಶ್ರೀನಿವಾಸ್ ಹೇಳಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT