`ಚಿತ್ರರಂಗ ಉಳಿಯಬೇಕೆಂದರೆ ನಿರ್ಮಾಪಕರು ಚೆನ್ನಾಗಿರಬೇಕು. ನಿರ್ಮಾಪಕರು ಗೆದ್ದರೆ ಕಾರ್ಮಿಕರು ಉಳಿಯುತ್ತಾರೆ~. ಇದು ನಿರ್ಮಾಪಕ ಕೆ.ಮಂಜು ಹೇಳುವ ಮಾತು.
ಸಾಲು ಸಾಲು ಚಿತ್ರಗಳನ್ನು ನಿರ್ಮಿಸುತ್ತಿರುವ ಕೆ.ಮಂಜು ಮೊದಲ ಬಾರಿಗೆ ಬೇರೆ ನಿರ್ಮಾಪಕರ ಚಿತ್ರವನ್ನು ತಮ್ಮ ಸಂಸ್ಥೆ ಮೂಲಕ ಬಿಡುಗಡೆ ಮಾಡಲು ಹೊರಟಿದ್ದಾರೆ.
ಗಣೇಶ್ ಅಭಿನಯದ `ಮದುವೆಮನೆ~ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಚಿತ್ರಕ್ಕೆ ಐದು ಕೋಟಿಯಷ್ಟು ಬಂಡವಾಳ ಹೂಡಿರುವ ರೆಹಮಾನ್ ಅವರಿಗೆ ಚಿತ್ರವನ್ನು ಮಾರುಕಟ್ಟೆಗೆ ತರುವುದು ಕಷ್ಟವಾಗಿದೆ.
ಹಾಗಾಗಿ ಅವರು ಕೆ.ಮಂಜು ಮೊರೆ ಹೋಗಿದ್ದರು. ರೆಹಮಾನ್ `ಯಜಮಾನ~ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದವರು. ಜೊತೆಗೆ ಸ್ನೇಹಿತ ಬೇರೆ. ಹಾಗಾಗಿ ಮಂಜು ಕಷ್ಟದಲ್ಲಿರುವ ಗೆಳೆಯನ ಕೈ ಹಿಡಿದಿದ್ದಾರೆ.
ಮದುವೆ ಮನೆ ಚಿತ್ರ ಗಣೇಶ್ ಅವರನ್ನು ಭಾವನೆಯ ಕಡಲಲ್ಲಿ ತೋಯಿಸಿದೆ. `ಸನ್ನಿವೇಶಗಳು ಸಾಕಷ್ಟು ಗಾಢ ಮತ್ತು ಆಪ್ತವಾಗಿವೆ.
ದೃಶ್ಯವೊಂದರ ಡಬ್ಬಿಂಗ್ ಮಾಡುವಾಗಂತೂ ಕಣ್ಣಲ್ಲಿ ನೀರು ಜಿನುಗಿತು. ಅಷ್ಟು ಹೃದಯಸ್ಪರ್ಶಿಯಾಗಿ ಚಿತ್ರ ಮೂಡಿಬಂದಿದೆ~ ಎಂದು ಗಣೇಶ್ ಸಂತಸ ವ್ಯಕ್ತಪಡಿಸಿದರು.
ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ ಚಿತ್ರ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬಂದಿದೆ ಎಂದರು. ಚಿತ್ರದಲ್ಲಿ ಗಣೇಶ್ ಪಾತ್ರವೇ ಹೈಲೈಟ್. ಅವರ ನಟನೆ ಮತ್ತು ಮಾತುಗಳು ಜನರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಚಿತ್ರೀಕರಣ 65 ದಿನ ನಡೆದಿದ್ದು, ಇದರಲ್ಲಿ ರೈಲಿನಲ್ಲಿ ನಡೆಯುವ ಘಟನೆಗಳ ಚಿತ್ರೀಕರಣಕ್ಕೆ 17 ದಿನ ಬೇಕಾಯಿತಂತೆ. ಚಿತ್ರ ಸಂಪೂರ್ಣ ಸ್ವಮೇಕ್. ಹಿಂದಿಯ `ದಿಲ್ವಾಲೆ ದುನಿಯಾ ಲೇ ಜಾಯೆಂಗೇ~ಯ ರಿಮೇಕ್ ಎನ್ನುವ ಸುದ್ದಿ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.
ಎಂದಿನಂತೆ ನಾಯಕಿ ಶ್ರದ್ಧಾ ಆರ್ಯ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು. ಶೀಘ್ರದಲ್ಲೇ ಮದುವೆ ಮನೆ ಊಟದ ಸವಿರುಚಿಯನ್ನು ಬಡಿಸಲು ಚಿತ್ರತಂಡ ಸಿದ್ಧವಾಗಿದೆ.