ಮದ್ದೂರು: ಪರಸ್ಪರ ಪ್ರೀತಿಸಿ, ಮದುವೆ ಸಮಯದಲ್ಲಿ ಕೈಕೊಟ್ಟು ಓಡಿ ಹೋಗುತ್ತಿದ್ದ ಯುವಕನನ್ನು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಕರೆತಂದು ಮದುವೆ ಮಾಡಿದ ಘಟನೆ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದಿದೆ.
ತಾಲ್ಲೂಕಿನ ಕೌಡ್ಲೆ ಗ್ರಾ.ಪಂ ವ್ಯಾಪ್ತಿಯ ತರಮನಕಟ್ಟೆ ಗ್ರಾಮದ ಮಂಗಳಮ್ಮ ಅವರ ಮಗಳು ಭವಾನಿ (20) ಮತ್ತು ತಿಮ್ಮಯ್ಯ ಅವರ ಮಗ ಗಿರೀಶ್(26) ಮೂರು ವರ್ಷಗಳಿಂದ ಪ್ರೇಮಿಸುತ್ತಿದ್ದರು.
ಈಚೆಗೆ ಇವರ ಪ್ರೇಮದ ವಿಚಾರ ಗ್ರಾಮಸ್ಥರಿಗೆ ತಿಳಿದು, ಮದುವೆ ಮಾಡಲು ನಿಶ್ಚಯ ಮಾಡಲಾಗಿತ್ತು. ಆದರೆ, ಗಿರೀಶ್ ಮದುವೆ ನಿರಾಕರಿಸಿ ಪರಾರಿಯಾಗಲು ಯತ್ನಿಸಿದ್ದ ಎನ್ನ ಲಾಗಿದೆ. ಇದರಿಂದ ಕಂಗಾಲಾದ ಭವಾನಿ ಕುಟುಂಬದವರು, ಈ ವಿಚಾರವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಅವರಿಗೆ ತಿಳಿಸಿದರು. ಪರಾರಿಯಾಗಲು ಯತ್ನಿಸುತ್ತಿದ್ದ ಗಿರೀಶ್ ಅವರನ್ನು ಭೇಟಿ ಮಾಡಿದ ಕರವೇ ಸದಸ್ಯರು, ಆತನನ್ನು ಪಟ್ಟಣ ಪೊಲೀಸ್ಠಾಣೆಗೆ ಕರೆತಂದು ನಂತರ ಮಾತುಕತೆ ನಡೆಸಿ ಒಪ್ಪಿಸಿದರು. ಠಾಣೆಯ ಎದುರೇ ಪರಸ್ಪರ ಹಾರ ಬದಲಾಯಿಸುವ ಮೂಲಕ ಸರಳ ವಿವಾಹ ಸಾಂಗವಾಗಿ ನಡೆಯಿತು. ಮಂಗಳವಾರ ಈ ಇಬ್ಬರ ವಿವಾಹವನ್ನು ಉಪನೊಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಲಾಯಿತು.
ಕೌಡ್ಲೆ ಗ್ರಾ.ಪಂ ಅಧ್ಯಕ್ಷ ತಿಮ್ಮಯ್ಯ, ಗ್ರಾಮದಮುಖಂಡ ಪುಟ್ಟಸ್ವಾಮಿ, ಪ್ರಭಾಕರ್, ರಾಜೇಶ್, ಪುರಸಭಾ ಸದಸ್ಯರಾದ ವೈ.ಬಿ.ಶಂಕರೇಗೌಡ, ನಿಂಗಯ್ಯ, ರಕ್ಷಣಾ ವೇದಿಕೆಯ ಮಹದೇವು, ಮಹಾಲಿಂಗು, ಕೃಷ್ಣ, ಸೋಮಣ್ಣ, ಕೃಷ್ಣಪ್ಪ, ವಾಸು ಸೇರಿದಂತೆ ಹಲವರು ಇದ್ದರು.